Saturday, March 29, 2025

ಜೊತೆಗಿರುತ್ತೇನೆ ಎಂಬ ಮಾತು ಅಷ್ಟೊಂದು ದುಬಾರಿಯೇ

 


ಅದೊಂದು ದಿನ ಆತ್ಮೀಯ(ನಾನು ಅಂದುಕೊಂಡದ್ದು)ರೊಬ್ಬರು I cant be always be with you ಎಂದು ಹೇಳಿದ ಮಾತು ಈಗಲೂ ಕಿವಿಯಲ್ಲಿ ಸದ್ದು ಮಾಡುತ್ತಿದೆ. ಒಮ್ಮೆ ನಿಮ್ಮದೇ ಬದುಕಿನ ಪುಟಗಳನ್ನು ತಿರುವಿ ಹಾಕಿ ನೋಡಿ, ನಿಮಗೂ ಹೀಗೊಂದು ಅನುಭವ ಆಗಿರಬಹುದು. ನಮ್ಮವರು, ಆತ್ಮೀಯರು, ಜೊತೆಗೆ ಎಂದಿಗೂ ಇರುವವರು ಎಂಬೆಲ್ಲಾ ಭ್ರಮೆಯಲ್ಲೇ ಬದುಕು ನಡೆಸುತ್ತಿರುತ್ತೇವೆ. ಒಂದು ಕ್ಷಣ ಆ ಭ್ರಮೆ ಕಳಿಚಿದರೆ ಸಾಕು ವಾಸ್ತವದ ಅರಿವಾಗುತ್ತದೆ. ಯಾರೂ ನಮ್ಮ ಜೊತೆಗೆ, ಎಂದಿಗೂ, ಎಲ್ಲಿಗೂ ಬರುವುದಿಲ್ಲ ಎಂಬುದು ಅರ್ಥವಾಗಿ ಬಿಡುತ್ತದೆ.

ಬಹುಶಃ ಈ ವಾಸ್ತವ ಅರ್ಥವಾಗುವ ವೇಳೆಗೆ ನಾವುಗಳು ಅರ್ಧ ಆಯಸ್ಸನ್ನೇ ಕಳೆದುಕೊಂಡು ಬಿಟ್ಟಿರುತ್ತೇವೆ ಅಥವಾ ಬದುಕಿನಲ್ಲಿ ಸಾಕಷ್ಟು ನೋವು ಅನುಭವಿಸಿರುತ್ತೇವೆ. ಭ್ರಮೆ ಕಳಚಿದಾಕ್ಷಣವೇ ಭೂಮಿ ಬಾಯಿ ತೆರೆಯಬಾರದಾ ಎಂದೆನಿಸದೇ ಇರದು. ಯಾವುದೂ, ಯಾರೂ ಬದುಕಿನಲ್ಲಿ ಶಾಶ್ವತ ಅಲ್ಲ ಎಂಬ ವಾಸ್ತವಿಕತೆಯನ್ನು ಒಪ್ಪಿಕೊಂಡು ಬಿಟ್ಟರೆ ಬಹುಶಃ ಇಷ್ಟೊಂದು ನೋವಾಗುತ್ತಿರಲಿಲ್ಲ ಎಂದು ಆ ಹೊತ್ತಿಗೆ ಎನಿಸಿತ್ತದೆ. ನನಗೆ ನಾನೇ ಎಂಬ ಕಹಿ ಸತ್ಯದೊಂದಿಗೆ ಬದುಕು ನಡೆಸಲು ಪ್ರಾರಂಭವಾಗಿ ಅದೆಷ್ಟೋ ವರ್ಷಗಳು ಕಳೆದುಹೋಗಿದೆ. ಆದರೂ, ಒಮ್ಮೊಮ್ಮೆ ಮಾಯೆ ತನ್ನ ಜಾಲವನ್ನು ಬೀಸಿಯೇ ಬಿಡುತ್ತದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ ಎನ್ನುವಷ್ಟು ಗಟ್ಟಿಯಾಗಿ ಬಂಧಿಯಾಗಿಸುತ್ತದೆ. 


 

ನನಗೂ ಅದೇ ಆದದ್ದು. ಹೀಗೊಂದು ಮಾತು ನನ್ನ ಬದುಕನ್ನೇ ಆಪೋಷನ ತೆಗೆದುಕೊಳ್ಳುತ್ತಿದೆ. ʼಈ ಹಿಂದೆ ನಿನ್ನ ಜೊತೆ ಯಾರೂ ಇರಲಿಲ್ಲ, ಮುಂದೆಯೂ ಯಾರೂ ಇರುವುದಿಲ್ಲ, ಅದೆಷ್ಟೇ ಪ್ರಯತ್ನ ಪಟ್ಟರೂ ಆರಕ್ಕೆ ಏರದ ಮೂರಕ್ಕೆ ಇಳಿಯದ ಹೊಟ್ಟೆ ಬಟ್ಟೆಗೆ ಕೊರತೆ ಇರದ ಬದುಕು ನಿನ್ನ ಪಾಲಿಗೆ ಕಟ್ಟಿಟ್ಟ ಬುತ್ತಿʼ. ಬದುಕಿನಲ್ಲಿ ಬಹಳ ದೊಡ್ಡ ದೊಡ್ಡ ಕನಸು ಕಂಡವಳು ನಾನು. ಸಣ್ಣ ಕನಸೇ ಅಪರಾಧ ಎನ್ನುವ ಕಲಾಂ ಅವರ ಮಾತನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದವಳು. ಆದರೆ, ಈಗ ಈ ಮಾತು ಕೇಳಿ ಭೂಮಿ ಬಾಯಿ ತೆರೆಯಬಾರದಾ ಎನಿಸುತ್ತಿರುವುದು ಮಾತ್ರ ಸುಳ್ಳಲ್ಲ.

ಯಾರೂ ಜೊತೆಗಿರದಾಗ ಒಬ್ಬಳೇ ನಿಂತು ಹೋರಾಡಿ ಬದುಕು ಕಟ್ಟಿಕೊಂಡ ನಾನು, ಇಂದಿಗೂ ಯಾರ ಆಶ್ರಯವನ್ನೂ ಬಯಸುತ್ತಿಲ್ಲ. ಆದರೆ, ನಾನು ಮಾನಸಿಕವಾಗಿ ನಿನ್ನೊಂದಿಗಿದ್ದೇನೆ ಎಂಬ ಮಾತನ್ನು ಕೇಳಬೇಕು ಎಂದು ಹಂಬಲಿಸಿದ್ದು ಮಾತ್ರ ಸುಳ್ಳಲ್ಲ. ಜೀವವೊಂದು ಆಸರೆ ಬಯಸುವುದು ಸಹಜವೇ ತಾನೇ. ನಾನೂ ಹಾಗೆಯೇ ಹುಟ್ಟಿಸಿದ ಜೀವವೋ ಅಥವಾ ಜನ್ಮ ನೀಡಿದಾಕೆಯೋ ಜೊತೆಗೆ ನಿಲ್ಲುತ್ತಾಳೆ ಕೈ ಹಿಡಿದು ಮೇಲೆತ್ತುತ್ತಾರೆ ಎಂದು ಬಯಸಿದ್ದ ಭ್ರಮೆಯೇ ಈಗ ಕಳಚಿ ಬಿದ್ದಿದೆ. ಅಕ್ಷರಶಃ ನನ್ನವರು ಯಾರೂ ಇಲ್ಲ ಎಂಬುದು ಅರಿವಿಗೆ ಬಂದಿದೆ.



ಹೆಜ್ಜೆ ಮುಂದೆ ಸಾಗದೇ ನಿಂತಾಗ ಯಾರಾದರೂ ದಾರಿ ಹೋಕರು ದಾರಿ ತೋರಿಸಿಯಾರು ಎಂದು ಸಹಜವಾಗಿ ಬಯಸಿದಂತೆ ಬಯಸಿದವಳು ನಾನು. ಆದರೆ ನನ್ನ ಬದುಕಿನಲ್ಲಿ ದಾರಿ, ದಾರಿಹೋಕರು ಯಾವುದೂ ಇಲ್ಲವೆಂಬುದು ಅರಿವಾಗಿ ನಿಂತಲ್ಲೇ ನಿಂತು ಬಿಟ್ಟಿದ್ದೇನೆ. ಕಾಲು ಕೀಳಲೂ ಸಾಧ್ಯವಾಗದ ಸ್ಥಿತಿಯಲ್ಲಿ. ಕಣ್ಣು ಹಾಯಿಸಿದ ಕಡೆಯೆಲ್ಲಾ ಬರೀ ಕತ್ತಲೆಯೇ ರಾಚುತ್ತಿದೆ. ಬೆಳಕಿನ ಒಂದೇ ಒಂದು ಅಂಶವೂ ಕಾಣುತ್ತಲೇ ಇಲ್ಲ. ಕೂಗಲೂ ಸ್ವರವಿಲ್ಲದಂತಾಗಿ ಬಿದ್ದಿದ್ದೇನೆ. ಇದೇ ವೇಳೆ I cant be always be with you ಎಂಬ ಮಾತು ಕಿವಿಗೆ ಪದೆ ಪದೇ ಅಪ್ಪಳಿಸುತ್ತಿದೆ. ಹಾಗಾದರೆ, ಜೊತೆಗಿರುವುದು ಎಂದರೆ, ಅಷ್ಟೊಂದು ದುಬಾರಿಯೇ ತಿಳಿಯುತ್ತಿಲ್ಲ. ಮನಸ್ಸು ಪಾತಾಳಕ್ಕೆ ಬಿದ್ದು ಮೇಲೆ ಬರಲೇ ಆಗದ ಸ್ಥಿತಿಯಲ್ಲಿ ಒದ್ದಾಡುತ್ತಿದೆ. ಬದುಕಿನಲ್ಲಿ ಏನಾದರೂ ಪವಾಡವಾದೀತೇ ಎಂದು ಕಾಯುತ್ತಾ.

Monday, March 17, 2025

Happy Women’s day to strong women

 

ಮಾರ್ಚ್ ಬಂತೆಂದರೆ ಮಹಿಳೆಯರ ದಿನ, ನವೆಂಬರ್ ಕನ್ನಡ ತಿಂಗಳು ಹೀಗೆ ಒಂದೊಂದು ತಿಂಗಳನ್ನು ಒಂದೊಂದು ವಿಷಯಕ್ಕೆ ಬ್ರಾಂಡ್ ಮಾಡಿಬಿಡುತ್ತಾರೆ. ಮಹಿಳಾ ದಿನದಂದು ಮಹಿಳೆಯರ ದಿನದ ಶುಭಾಶಯ ಕೋರಿದರೆ, ನವೆಂಬರ್ ತಿಂಗಳಲ್ಲಿ ಕನ್ನಡದ ಬಗ್ಗೆ ಧ್ವನಿ ಎತ್ತಿದ ಮಾತ್ರಕ್ಕೆ ಅವುಗಳ ಉದ್ಧಾರವಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೂ ಅದರ ಗುಂಗಿನಿಂದ ಆಚೆ ಬಂದಿರುವುದಿಲ್ಲ.

ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ತುಸು ಸಂಭ್ರಮದಿಂದಲೇ ಆಚರಿಸಲಾಯಿತು. ಮಹಿಳಾ ಸಬಲೀಕರಣ, ಸ್ವಾತಂತ್ರ್ಯ, ಸಮಾನತೆ ಕುರಿತಾದ ಮಾತುಕತೆ ಜೋರಾಗಿಯೇ ಇತ್ತು. ಸಾಕಷ್ಟು ಮಂದಿ ವೈಯಕ್ತಿಕವಾಗಿ, ವಾಟ್ಸಾಪ್ ಗುಂಪಿನಲ್ಲಿ ಮಹಿಳಾ ದಿನದ ಕುರಿತಾಗಿ ನಾನು ಮಹಿಳೆ ಎಂಬ ಕಾರಣಕ್ಕೆ ಶುಭಾಶಯ ಕೋರಿದ್ದರು.

ಆದರೆ ಒಂದು ಸಂದೇಶ ತುಸು ತಡವಾಗಿ ಬಂದರೂ ಬಹಳ ಭಿನ್ನವಾಗಿತ್ತು. Happy Women’s Day to self motivated strong women ಅಂತ ಬರೆದು ಕಳಿಸಿದ್ದರು. ಇಷ್ಟು ವರ್ಷದಲ್ಲಿ ಮೊದಲ ಬಾರಿಗೆ ಹಾಗೆ ಗಟ್ಟಿಗಿತ್ತಿ ಅಂತ ಸಂಭೋದಿಸಿದ್ದು ನನಗೆ ಮುಜಗರದ ಜೊತೆಗೆ ಸ್ವಲ್ಪ ಯೋಚನೆಗೆ ದೂಡಿದ್ದು ಮಾತ್ರ ಸುಳ್ಳಲ್ಲ. ಇದಾದ ನಂತರ ಮತ್ತೊಬ್ಬರು ಕೂಡ ನೀನು ಬಹಳ Strong women ಎಂದು ಹೊಗಳಿದ್ದರು (ಹೊಗಳಿದ್ದು ಎಂದು ನಾನು ಭಾವಿಸಿಕೊಂಡದ್ದು).

ಆ ಕೂಡಲೇ, ತಮಾಷೆಗೆ ನಾನು ಮಹಿಳೆಯಾಗಿಲ್ಲ ಇನ್ನೂ ಹುಡುಗಿಯಷ್ಟೇ. ಹಾಗಾಗಿ ಮಹಿಳೆ ಎಂದು ಸಂಭೋದಿಸಿ ದೊಡ್ಡವಳನ್ನಾಗಿ ಮಾಡಬೇಡಿ ಎಂದು ಚಟಾಕಿ ಹಾರಿಸಿದ್ದೆ. ಆದರೆ ವಾಸ್ತವವಾಗಿ ನನ್ನ ಮನಸ್ಸಿನಲ್ಲಿ Strong women ಎಂಬ ವಿಚಾರದ ಬಗೆಗೇ ಆಲೋಚನೆ ಸುತ್ತುತ್ತಿತ್ತು.

Strong women ಎಂಬ ಪದ ಮನಸ್ಸಿನಲ್ಲಿ ಆಗಾಗ್ಗೆ ಸುಳಿಯುತ್ತಿತ್ತು. ಹಾಗಾಗಿ, ವಾಸ್ತವವಾಗಿ ನಾನು Strong women ಹೌದಾ? ಎಂಬ ಪ್ರಶ್ನೆ ಹಾಕಿಕೊಳ್ಳಲು ಮುಂದಾದೆ. ಏಕೆಂದರೆ ಹೊರಗಿನಿಂದ ನೋಡಲು ಬಹಳ ಖಡಕ್, ಗಟ್ಟಿ ಧ್ವನಿ, ಗಂಭೀರ ವದನೆ ಇವೆಲ್ಲವನ್ನೂ ನೋಡಿ ಸಮಾಜ ಹೀಗೆ ಗುರುತಿಸಿದ್ದು ಹೊಸದೇನೂ ಆಗಿರಲಿಲ್ಲ. ಆದರೆ, ನಿಜವಾಗಿಯೂ ಒಳಗೆ ಇಳಿದು ಅಂತರಂಗವನ್ನು ಒಮ್ಮೆ ನೋಡಿದರೆ ಅದರಲ್ಲಿ ಗಟ್ಟಿ ಅನ್ನೋ ಪದಕ್ಕೆ ಅರ್ಥವೇ ಇಲ್ಲ ಎಂಬುದು ನನಗಷ್ಟೇ ತಿಳಿದಿತ್ತು. ಅಲ್ಲದೇ, ಮುಖವಾಡದ ಹಿಂದಿನ ನನ್ನನ್ನು ಸಮಾಜಕ್ಕೆ ಪರಿಚಯಿಸುವ ಇರಾದೆಯೂ ನನಗೆ ಬೇಕಿರಲಿಲ್ಲ.  

ನನ್ನ ಬದುಕಿನಲ್ಲಿ ಪದೆ ಪದೇ ನಡೆದ ಅಹಿತಕರ ಘಟನೆಗಳು ನೀನು ಅದೆಷ್ಟು ಗಟ್ಟಿ? ಎಂದು ನನ್ನದೇ ಅಂತರಂಗ ಅಣಕವಾಡಿಸುತ್ತಲೇ ಇರುವ ಹೊತ್ತಿನಲ್ಲೇ ಗಟ್ಟಿಗಿತ್ತಿ ಎಂಬ ಸಂಭೋದನೆ ನನ್ನನ್ನು ಮತ್ತೊಮ್ಮೆ ಒಳಗೊಮ್ಮೆ ಇಣುಕಿ ನೋಡುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಈ ಹಿಂದೆಯೂ ಅದೆಷ್ಟೋ ಬಾರಿ ನನಗೆ ನಾನೇ ಹೇಳಿಕೊಂಡದ್ದೂ ಇದೆ. ಗಟ್ಟಿಗಿತ್ತಿ ಎಂಬ ಮುಖವಾಡ ಹಾಕಿಕೊಂಡು ಅಂತರಂಗದಲ್ಲಿ ಎಲ್ಲವನ್ನೂ ಮುಚ್ಚಿಟ್ಟುಕೊಂಡು ಅದೆಷ್ಟು ದಿನ ಈ ಸಮಾಜದಲ್ಲಿ ಬದುಕಲು ಸಾಧ್ಯ?, ಗಟ್ಟಿಗಿತ್ತಿ ಎಂಬ ಮುಖವಾಡ ಹಾಕಿಕೊಳ್ಳದೇ ಒಂಟಿ ಮಹಿಳೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲವೇ? ಹೀಗೆ ಪ್ರಶ್ನೆಗಳ ಸುರಿಮಳೆಯೇ ನನ್ನ ಮುಂದೆ ದುತ್ತೆಂದು ಕಾಡುತ್ತದೆ.

ಈಗಲೂ ಅದೇ ಪ್ರಶ್ನೆಗಳು ಕಾಡುತ್ತಲೇ ಇದೆ. ಏಕೆಂದರೆ, ಕಳೆದ ಐದು ತಿಂಗಳ ಹಿಂದೆ ಇದ್ದಕ್ಕಿದ್ದ ಹಾಗೆ ಅಮ್ಮ ಬಾರದ ಲೋಕಕ್ಕೆ ತೆರಳಿದ ಆ ಕ್ಷಣದಿಂದಲೂ ಆಗುತ್ತಿರುವ ಮಾನಸಿಕ ಯಮ ಯಾತನೆಯ ನಡುವೆಯೂ ಗಟ್ಟಿಗಿತ್ತಿ ಎಂಬ ಮುಖವಾಡ ಹಾಕಿಕೊಂಡು ತಿರುಗುತ್ತಿರುವ ನಾನು ಅದೆಷ್ಟರ ಮಟ್ಟಿಗೆ ಗಟ್ಟಿಗಿತ್ತಿ ಆಗಿರಲು ಸಾಧ್ಯ?

ಈ ಹಿಂದೆಯೂ ಸಾಕಷ್ಟು ನೋವು ಅನುಭವಿಸಿದ್ದರೂ ಅಮ್ಮನ ಸಾವು ನನ್ನ ಇಡೀ ಬದುಕಿನ ಬುಡವನ್ನೇ ಅಲ್ಲಾಡಿಸಿ ಬಿಡುತ್ತಿದೆ. ಸಾವು ಒಂದು ಸಹಜ ನೈಸರ್ಗಿಕ ಪ್ರಕ್ರಿಯೆ. ಹುಟ್ಟು ಅದೆಷ್ಟು ಸ್ವಾಭಾವಿಕವೋ, ಸಾವು ಕೂಡ ಅಷ್ಟೇ ಸ್ವಾಭಾವಿಕ ಎಂದೇ ಮನಸ್ಸಿಗೆ ತಂದುಕೊಂಡವಳು ನಾನು. ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರೂ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.



ಕಳೆದೊಂದು ತಿಂಗಳಿಂದ ಮನುಷ್ಯನ ಜೊತೆಗಿನ ಸಂಪರ್ಕವೇ ಬೇಡವೆನಿಸುವಷ್ಟು ಬೇಸರ ತರಿಸಿದೆ ಈ ಬದುಕು. ಕಾಲೇಜಿನ ಕೆಲಸ ಮುಗಿದ ಕೂಡಲೇ ಮನೆಗೆ ಹೋಗಿ ಬಾಗಿಲು ಮುಚ್ಚಿದರೆ ಮತ್ತೆ ಕಾಲೇಜಿಗೆ ಬರುವಾಗಲೇ ಬಾಗಿಲು ತೆರೆಯುವಷ್ಟರ ಮಟ್ಟಿಗೆ ನನ್ನನ್ನು ನಾನು ಸೀಮಿತಗೊಳಿಸಿಕೊಂಡು ಬಿಟ್ಟಿದ್ದೇನೆ. ಕೆಲಸದ ನಿಮಿತ್ತ ಅನಿವಾರ್ಯವಾಗಿ ಸಹೋದ್ಯೋಗಿಗಳ ಜೊತೆಗೆ ಕಾಟಾಚಾರದ ಮಾತುಗಳನ್ನಾಡುವುದು ಬಿಟ್ಟರೆ ಬೇರೆ ಯಾವ ಮಾತೂ ಬೇಡವೆನಿಸುತ್ತಿದೆ. ನನ್ನಿಷ್ಟದ ಕೆಲಸ ಬರವಣಿಗೆಯಲ್ಲೂ ತೊಡಗಿಸಿಕೊಳ್ಳಲು ಮನಸ್ಸು ಬರುತ್ತಿಲ್ಲ. ಒಂದು ರೀತಿ ಸತ್ತಂತೆ ಬಿದ್ದಿರುತ್ತೇನೆ.

ಸುತ್ತಲಿನ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದರ ಅರಿವೂ ಇಲ್ಲದಂತೆ ಯಂತ್ರದ ಹಾಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕರ್ತವ್ಯವೇ ದೇವರು ಎಂಬಂತೆ ಅದರಲ್ಲೇ ಮುಳುಗಿರುವುದು ಬಿಟ್ಟರೆ ಬೇರೆ ಯಾವುದರ ಅರಿವೂ ಇಲ್ಲದಷ್ಟು ಅನ್ಯಮನಸ್ಕಳಾಗಿದ್ದೇನೆ. ಹಾಗಿದ್ದೂ ಗಟ್ಟಿಗಿತ್ತಿ ಆಗಲು ಹೇಗೆ ಸಾಧ್ಯ? ಎಂಬುದೇ ಸೋಜಿಗ. ನನಗೆ ನನ್ನದೇ ಸ್ಥಿತಿಯನ್ನು ನೋಡಿಕೊಂಡು ಏನೆಂದು ಹೇಳಬೇಕು? ಎಂಬುದೇ ತಿಳಿಯುತ್ತಿಲ್ಲ.

Sunday, December 15, 2024

ಅಮ್ಮನಿಲ್ಲದೇ ಕಳೆದ ಒಂದು ತಿಂಗಳಲ್ಲಿ ಆಕೆಗೊಂದು ಪತ್ರ

ಅಮ್ಮ ನೀನಿಲ್ಲದೇ ಒಂದು ತಿಂಗಳು ಕಳೆದು ಹೋಯಿತು. ಆದರೆ ಈ ಕ್ಷಣಕ್ಕೂ ನೀನು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಅದೆಲ್ಲೋ ದೂರದಲ್ಲಿ ಇದ್ದೀಯಾ ಎಂಬ ಭರವಸೆಯೇ ಇಲ್ಲಿವರೆಗೂ ನನ್ನನ್ನು ಬದುಕಿಸಿದೆ. ನೀನು ಇದ್ದಾಗ ನಾನು ಅಷ್ಟೊಂದು ಹಚ್ಚಿಕೊಂಡಿಲ್ಲ ಎಂದೇ ತಿರುಗಾಡುತ್ತಿದ್ದೆ; ಆದರೆ ಹೋದ ಮೇಲೆಯೇ ಗೊತ್ತಾದದ್ದು ನೀನು ನನ್ನನ್ನು ಅದೆಷ್ಟು ಆವರಿಸಿಕೊಂಡಿದ್ದೀಯಾ ಎಂಬುದು. ಸಣ್ಣ ಸಣ್ಣ ವಿಚಾರಗಳನ್ನೂ ಮನಸ್ಸಿಗೆ ತೆಗೆದುಕೊಂಡು ಕೊರಗುತ್ತೀಯಾ ಎಂದು ಏನನ್ನೂ ಹೇಳಲು ಬಾಯಿ ಬರುತ್ತಿರಲಿಲ್ಲ. ಆದರೆ ಈಗ ಎಲ್ಲವೂ ಹೇಳಬೇಕು ಎನಿಸುತ್ತಿದೆಯಾದರೂ, ನಿನ್ನ ಗೈರುಹಾಜರಿ ಬಹಳ ಕಾಡುತ್ತಿದೆ. ಆದರೂ ನಿನಗೆ ತಲುಪುತ್ತದೆ ಎಂಬ ಆಶಾಭಾವನೆಯೊಂದಿಗೆ ಈ ಪತ್ರ ಬರೆಯುತ್ತಿದ್ದೇನೆ.

ಕಳೆದೊಂದು ತಿಂಗಳಲ್ಲಿ ಅದೆಷ್ಟೋ ಘಟನೆಗಳು ಸಂಭವಿಸಿಬಿಟ್ಟವು. ಅವೆಲ್ಲವಕ್ಕೂ ಮೂಕ ಸಾಕ್ಷಿಯಾಗಿ ನಿಂತಿದ್ದೆ. ನೀನಿಲ್ಲದ ಪ್ರತಿ ಕ್ಷಣವೂ ಯುಗದಂತೆ ಕಾಡುತ್ತಿದೆ. ಯಾವ ಕೆಲಸಕ್ಕೂ ಮನಸ್ಸು ಆಸಕ್ತಿ ತೋರುತ್ತಿಲ್ಲ. ಸುಮ್ಮನೆ ಯಂತ್ರದ ಹಾಗೆ ಕೆಲಸ ಮಾಡುತ್ತಿದ್ದೇನೆ. ಅದೇನು ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಉತ್ತರ ನನ್ನಲ್ಲೂ ಇಲ್ಲ. ಚಕ್ರ ಸುಮ್ಮನೆ ತಿರುಗುತ್ತಿದೆ ಅಷ್ಟೇ.



ಈ ಘಟನೆಯನ್ನು ನಿನಗೆ ಮರೆಯದೇ ಹೇಳಲೇಬೇಕು. ನನ್ನ ವಿದ್ಯಾರ್ಥಿಗಳು ನನ್ನದೇ ಮಕ್ಕಳ ಹಾಗೆ ನಿನ್ನ ಅಗಲಿಕೆಯ ನೋವನ್ನು ಅನುಭವಿಸಿದರು. ನನ್ನ ಬಾಡಿದ ಮುಖ ಅವರಲ್ಲಿ ಅಸಹಾಯಕತೆಯನ್ನು ಪ್ರದರ್ಶಿಸುತ್ತಿತ್ತು. ತರಗತಿಯಲ್ಲಿ ಬಹಳ ಶಿಸ್ತಿನಿಂದ ನನ್ನ ಗೈರುಹಾಜರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಬಹಳ ದೊಡ್ಡವರಾಗಿ ಬಿಟ್ಟರು. ಆದರೆ ಅವರಿಗಾಗಿ ಏನನ್ನೂ ನಾನು ಕೊಡಲು ಸಾಧ್ಯವೇ ಆಗಲಿಲ್ಲ ಎಂಬ ಹತಾಶೆ ಇನ್ನೂ ಕಾಡುತ್ತಿದೆ.

ಅಂದು ನಿನ್ನ ಫೋಟೊಗೆ ಹಾರ ಹಾಕಿ ನೀನು ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾಗ ನೀನು ಎಲ್ಲರ ಮನಸ್ಸಿನಲ್ಲಿ ಅದೆಷ್ಟು ಎತ್ತರಕ್ಕೆ ಬೆಳೆದಿದ್ದೆ ಎಂಬುದು ಅರಿವಾಯಿತು. ಅಲ್ಲದೇ, ಅಂತಹ ಮೇರು ವ್ಯಕ್ತಿಯ ಮಗಳಾಗಿ ನಾನು ಹುಟ್ಟಿದ್ದು ನನ್ನ ಭಾಗ್ಯವೇ ಸರಿ ಎನಿಸಿತು. ಆದರೆ ಆ ಭಾಗ್ಯವನ್ನು ತುಂಬಾ ದಿನ ಅನುಭವಿಸಲು ಸಾಧ್ಯವಾಗಲಿಲ್ಲ ಎಂಬ ನೋವು ಮತ್ತೆ ಮತ್ತೆ ಒತ್ತರಿಸಿ ಬರಲು ಆರಂಭವಾಯಿತು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಶುರುವಾಯಿತು. ಇನ್ನು ಕೆಲಸ ಕೆಟ್ಟಿತು ಎಂದು ಮನೆಯವರೆಲ್ಲಾ ಚಡಪಡಿಸುತ್ತಿದ್ದಾಗ ಅವರೆಲ್ಲರಿಗೂ ಅಮ್ಮನೇ ಎಲ್ಲವನ್ನು ಮಾಡಿಸಿಕೊಳ್ಳುತ್ತಾರೆ ಎಂದೇ ಹೇಳುತ್ತಿದ್ದೆ. ಹಾಗೆಯೇ ನಿರೀಕ್ಷೆಗೂ ಮೀರಿ ಎಲ್ಲರೂ ಬಂದರು. ವೇದಘೋಷ, ಮಂತ್ರಪಠಣ, ರುದ್ರ, ಚಮೆ, ಚತುರ್ವೇದ ಪಾರಾಯಣ ಹೀಗೆ ಎಲ್ಲವೂ ಸಾಂಗವಾಗಿ ನೆರವೇರಿತು. ಈ ಎಲ್ಲಾ ಕಾರ್ಯದಲ್ಲೂ ನಿನ್ನ ಪಾತ್ರವನ್ನು ತೆಗೆದುಹಾಕಲು ಸಾಧ್ಯವೇ ಇಲ್ಲ. ಈ ಎಲ್ಲದರ ಹಿಂದಿನ ಶಕ್ತಿ ನೀನೇ ಆಗಿದ್ದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ.

ಎಂದಿನ ಹಾಗೆ, ಕಾಲೇಜು ಮುಗಿಸಿ ಮನೆಗೆ ಬಂದಾಗ ಫೋನ್‌ ಕೈಗೆತ್ತಿಕೊಂಡು ನಿನ್ನದೇ ಮೊಬೈಲ್‌ ನಂಬರ್‌ಗೆ ಕರೆ ಮಾಡಿ ಮಾತಾಡಬೇಕು ಎನಿಸುತ್ತದೆ. ಆದರೆ ಆ ಕಡೆಯಿಂದ ನಿನ್ನ ಧ್ವನಿ ಕೇಳುವುದೇ ಇಲ್ಲ ಎಂಬ ವಾಸ್ತವ ಅರಿವಿಗೆ ಬಂದು ಮನಸ್ಸು ಮತ್ತೆ ಬಾಡುತ್ತದೆ. ನಿನ್ನದೇ ನೆನಪು ಪ್ರತಿಕ್ಷಣವೂ ಬಿಟ್ಟೂಬಿಡದೇ ನೆರಳಿನಂತೆ ಹಿಂಬಾಲಿಸುತ್ತದೆ. ಮಂಗಳೂರಿಗೆ ಬರುವಾಗ ಪದೆ ಪದೇ ಸೀರೆ ಬಟ್ಟೆ ತರುವುದು ಬೇಡ ಎಂದು ಇಲ್ಲೇ ಬಿಟ್ಟು ಹೋಗಿದ್ದ ನಿನ್ನ ಸೀರೆಯನ್ನು ನೋಡಿದ ಕೂಡಲೇ ಮತ್ತೆ ಯಾರು ಈ ಸೀರೆ ಉಡುತ್ತಾರೆ ಎಂಬ ಪ್ರಶ್ನೆ ಕಾಡುತ್ತದೆ.

ನಿನಗೆ ಅದೇಕೆ ಅಷ್ಟೊಂದು ಆತುರ. ನಾವು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲವೇ. ಅದೇಕೇ ಅಷ್ಟೊಂದು ಆತುರದಲ್ಲಿ ಹೊರಟುಬಿಟ್ಟೆ ನಿನ್ನವರನ್ನೆಲ್ಲಾ ಬಿಟ್ಟು. ನೀನು ಸುಮ್ಮನೆ ಮನೆಯಲ್ಲಿ ಮಲಗಿದ್ದರೂ ನಮಗೆಲ್ಲಾ ಆನೆ ಬಲ ಇರುತ್ತಿತ್ತು. ಈಗ ನೀನೇ ಇಲ್ಲದೇ ನಮಗೆಲ್ಲರಿಗೂ ಬಲವೇ ಇಲ್ಲದಂತಾಗಿದೆ. ಮನೆ ಬಣಗುಡುತ್ತಿದೆ. ಮನೆ ಒಳಗೆ ಕಾಲಿಡಲು ಎರಡೆರಡು ಸಲ ಯೋಚಿಸುವಂತಾಗಿದೆ. ಸಂವರ್ಧಿನಿಗೆ ಕಳೆಯೇ ಇಲ್ಲದೇ ಸೊರಗುತ್ತಿದೆ. ನಿನ್ನ ಅಗಲುವಿಕೆಯನ್ನು ಮನೆಯ ಜೀವ ವಸ್ತುಗಳಲ್ಲದೇ, ನಿರ್ಜೀವ ವಸ್ತುಗಳೂ ಅನುಭವಿಸುತ್ತಿವೆ.



ನೀನು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಆಗದ ಭ್ರಮಾಲೋಕದಲ್ಲಿ ಬದುಕುತ್ತಿದ್ದೇನೆ. ನೀನು ಯಾವಾಗಲೂ ಹೇಳುತ್ತಿದ್ದೆಯಲ್ಲಾ, ನಾನು ಹೋದ ಮೇಲೆ ನಿಮಗೆಲ್ಲಾ ಅಮ್ಮನ ಬೆಲೆ ಗೊತ್ತಾಗುತ್ತದೆ ಎಂದು. ಅದು ಅಕ್ಷರಶಃ ಅರಿವಿಗೆ ಬರುತ್ತಿದೆ. ಪ್ರತಿ ಕೆಲಸ, ಪ್ರತಿ ಮಾತು, ಪ್ರತಿ ಆಲೋಚನೆ ಹೀಗೆ ಎಲ್ಲದರಲ್ಲೂ ನೀನೇ ಆವರಿಸಿಕೊಂಡಿರುವೆ. ನಿನಗೆ ಗೊತ್ತಾ ಅಣ್ಣ, ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ ಜ್ವರ ಬರಿಸಿಕೊಂಡು ಬಿಟ್ಟಿದ್ದಾರೆ. ಶೀತ, ಕೆಮ್ಮು ಬೇರೆ ಶುರುವಾಗಿದೆ. ಸಾಕಷ್ಟು ಕುಗ್ಗಿ ಬಿಟ್ಟಿದ್ದಾರೆ. ಇಷ್ಟು ವರ್ಷ ಜೊತೆಯಾಗಿ ನಿಂತು ಈಗ ಎದ್ದು ಹೋದದ್ದು ಜೀರ್ಣಿಸಿಕೊಳ್ಳಲೇ ಆಗುತ್ತಿಲ್ಲ.

ಹೀಗೆ ಎಲ್ಲರದ್ದು ಒಂದೊಂದು ರೀತಿಯ ನೋವು. ಹೇಳುತ್ತಾ ಹೋದರೆ ಮುಗಿಯದು ಈ ನೋವಿನ ಮಾತು. ಅದೆಷ್ಟು ಹೇಳಿದರೂ ಮಾತು ಮುಗಿಯುವುದೇ ಇಲ್ಲ. ಪ್ರತಿ ಮಾತಿನಲ್ಲೂ ನಿನ್ನದೇ ನೆನಪು, ನಿನ್ನದೇ ಕನವರಿಕೆ ಅಮ್ಮ. ಮತ್ತೆ ಕೇಳಿಕೊಳ್ಳುತ್ತಿದ್ದೇನೆ ಹಿಂದಿನಂತೆ ಮುಂದೆಯೂ ಕೈ ಹಿಡಿದು ನಡೆಸು, ಆದಷ್ಟು ಬೇಗ ನಿನ್ನ ಬಳಿಗೆ ನನ್ನನ್ನೂ ಸೇರಿಸಿಕೊ. ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುತ್ತೇನೆ. ಮತ್ತೆ ಮತ್ತೆ ಕಾಡುವ ಮಾತಿನೊಂದಿಗೆ ಸಿಗುತ್ತೇನೆ.

ಬಡಿದೆಬ್ಬಿಸದಿರು ಮನಸ್ಸಿನ ಅಲೆಗಳನ್ನು, ತಡೆಯುವ ಕಸುವು ಉಳಿದಿಲ್ಲ ಗೆಳೆಯಾ!

 ಆ ದಿನ ನಾಳೆ ಊಟ ತರಬೇಡ ಅಂತಾ ಹೇಳಿ ಊಟದ ಮೆನುವನ್ನು ವಿವರಿಸಿದ್ದೆ. ಹಾಗಾಗಿ ಮರುದಿನ ಕಾಲೇಜಿಗೆ ಬರುವಾಗ ಊಟದ ಡಬ್ಬಿಯ ಜೊತೆಗೆ ಬರಲಿಲ್ಲ. ಕಾರ್ಯಕ್ರಮಕ್ಕಂತೂ ಆಹ್ವಾನ ನೀಡಲಿಲ್ಲ. ಹಿಂದಿನ ದಿನ ಹೇಳಿದ ಹಾಗೆ ಊಟಕ್ಕಾದರೂ ಕರೆಯುವೆ ಎಂದು ಮಧ್ಯಾಹ್ನವಿಡೀ ಕಾದು ಕೊನೆಗೆ ಖಾಲಿ ಹೊಟ್ಟೆಯಲ್ಲೇ ಸಂಜೆ ಮನೆಗೆ ತೆರಳಿ ಬಿಟ್ಟೆ.

ವಾಸ್ತವವಾಗಿ, ಊಟ ನನಗೆ ಮುಖ್ಯ ವಿಷಯವಲ್ಲ; ನಿನ್ನ ಮಾತಿಗೆ ಗೌರವ ಕೊಡಬೇಕೆಂಬ ಹಂಬಲವಷ್ಟೇ. ಮನಸ್ಸು ರಚ್ಚೆ ಹಿಡಿಯದಿರಲಿ ಎಂಬ ಕಾರಣಕ್ಕೆ, ಬಹುಶಃ ನೀನು ಕಾರ್ಯಕ್ರಮದ ಗಡಿಬಿಡಿಯಲ್ಲಿ ಮರೆತು ಹೋಗಿರಬಹುದು ಎಂದು ಸಮಾಧಾನ ಮಾಡಿಕೊಂಡೆ. ಆದರೆ ಹಸಿವು ಸುಮ್ಮನೆ ಕೂರಲು ಬಿಡಲಿಲ್ಲ. ಹಾಗಾಗಿ ಹೀಗೆ ಬರೆದು ಭಾರ ಇಳಿಸಿಕೊಳ್ಳುತ್ತಿದ್ದೇನೆ. ತಪ್ಪು ತಿಳಿಯಬೇಡ.

ನೀನು ನನಗಿಂತಲೂ ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯವನಾಗಿದ್ದರೂ, ನಾವಿಬ್ಬರೂ ಅದೆಷ್ಟೋ ದಿನಗಳನ್ನು, ಸಂಜೆಗಳನ್ನು ಜೊತೆಗೆ ಕಳೆದಿದ್ದೇವೆ. ಆಗೆಲ್ಲಾ ನಮ್ಮಿಬ್ಬರ ಮಧ್ಯೆ ಸಾಕಷ್ಟು ಚರ್ಚೆ, ವಾಗ್ವಾದ, ಸಣ್ಣ ಜಗಳ ಎಲ್ಲವೂ ಆಗಿದೆ. ಅದಾವುದಕ್ಕೂ ಅಷ್ಟೊಂದು ಮಹತ್ವ ಕೊಡಲಿಲ್ಲ. ಸಾಕಷ್ಟು ಸಂದರ್ಭಗಳಲ್ಲಿ ಮನಸ್ಸು ಬೇಸರಕ್ಕೆ ತಿರುಗಿದ್ದೂ ಇದೆ. ಅದೆಲ್ಲವನ್ನೂ ಪಕ್ಕಕ್ಕಿರಿಸಿ ಮುಂದೆ ಸಾಗಿದ್ದೇವೆ. ಅದೆಷ್ಟೋ ಬಾರಿ ನೀನು ಕೇಳಿದ ಸಹಾಯಕ್ಕೋ ಅಥವಾ ಮತ್ತಾವುದೋ ಕೆಲಸಕ್ಕೋ ಇಲ್ಲ ಎಂದು ಹೇಳಬೇಕೆಂದು ಗಟ್ಟಿ ಮನಸ್ಸು ಮಾಡಿದರೂ, ನಿನ್ನ ಧ್ವನಿ ಕೇಳಿದ ಕೂಡಲೇ ಎಲ್ಲವನ್ನು ಕ್ಷಣ ಮಾತ್ರದಲ್ಲಿ ಮರೆತು ಬಿಡುತ್ತಿದ್ದೆ. ಅದೇನು ಮೋಡಿ ಮಾಡಿದ್ದೀಯೋ ತಿಳಿದಿಲ್ಲ. ಮನಸ್ಸಿನ ಆಳಕ್ಕೆ ಇಳಿದುಬಿಟ್ಟಿರುವೆ.

ನಾನು ಸ್ವಲ್ಪ ಅಂತರ್ಮುಖಿ. ಯಾರ ಜೊತೆಗೂ ಇರದ ಸಲುಗೆ ನಿನ್ನೊಂದಿಗೆ ಬೆಳೆದಿದೆ. ಹಾಗಾಗಿ ನನ್ನ ಪರಿಸ್ಥಿತಿ ಏನೇ ಇದ್ದರೂ ನಿನ್ನ ಮಾತಿಗೆ ಕಟ್ಟುಬಿದ್ದು ಕೆಲಸಕ್ಕೆ ಮುಂದಾಗುತ್ತೇನೆ. ಆದರೆ ಇತ್ತೀಚೆಗೆ ನನ್ನನ್ನು ಬಳಸಿಕೊಂಡ ರೀತಿ ಮಾತ್ರ ಬಹಳ ಬೇಸರ ತರಿಸುತ್ತಿದೆ. ಹಾಗೆಂದು ನನಗೆ ವಿಶೇಷ ಸ್ಥಾನಮಾನ ಬೇಕೆಂದು ಅಥವಾ ಬೇರೆ ಯಾವುದೇ ರೀತಿಯ ಪ್ರಾಶಸ್ತ್ಯ ಬೇಕೆಂದೂ ಬಯಸುವುದಿಲ್ಲ. ಆದರೆ ನಿನ್ನ ಅಗತ್ಯ ಪೂರೈಸಿದ ನಂತರ ನನ್ನ ಪರಿಚಯವೇ ಇಲ್ಲದಂತೆ ನಡೆದುಕೊಳ್ಳುವ ನಿನ್ನ ವರ್ತನೆ ಮನಸ್ಸಿಗೆ ಘಾಸಿ ಮಾಡುತ್ತಿದೆ.

ಎಲ್ಲರ ಹಾಗೆ ನೀನಲ್ಲಾ. ಒಬ್ಬ ಸೂಕ್ಷ್ಮ, ಸಂವೇದನಾಶೀಲ, ಪ್ರೌಢ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿ ಎಂಬ ಕಾರಣಕ್ಕಾಗಿಯೇ ಮನಸ್ಸಿನ ಒಳಗೆ ಬಿಟ್ಟುಕೊಂಡೆ. ನನ್ನ ಪರಿಸ್ಥಿತಿ ಎಂಥಹದ್ದೇ ಇದ್ದರೂ ಅದನ್ನು ಲೆಕ್ಕಿಸದೇ ನನ್ನ ಜೊತೆಗೆ ನೀನು ಆತ್ಮೀಯ ಸಂಬಂಧ ಬೆಳೆಸಿದೆ. ಎಲ್ಲರ ಹಾಗೆ ನೀನಲ್ಲ ಎಂಬುದು ಆ ಕ್ಷಣಕ್ಕೆ ನನಗೆ ಮನವರಿಕೆಯಾಗಿತ್ತು.

ಹೌದು! ನಿನಗೆ ನಿನ್ನದೇ ಆದ ಸಾಕಷ್ಟು ಒತ್ತಡಗಳು, ಕೆಲಸಗಳು ಎಲ್ಲವೂ ಇದ್ದಾವೆ ಎಂಬುದು ನನಗೆ ಸ್ಪಷ್ಟವಾಗಿ ಅರಿವಿದೆ ಗೆಳೆಯ. ಆದರೆ ಇತ್ತೀಚೆಗೆ ನೀನು ನಡೆದುಕೊಳ್ಳುವ ರೀತಿಗೆ ಮನದಲ್ಲಿ ಒಂದು ಸಣ್ಣ ಆತಂಕ ಮೂಡುತ್ತಿದೆ. ಅಂದು ಸಂಜೆಗೆ ಮನೆಗೆ ಬಂದ ಮೇಲೂ ಮನಸ್ಸು ತಹಬದಿಗೆ ಬರಲಿಲ್ಲ. ಹಾಗಾಗಿ ಇಷ್ಟದ ಸಂಗೀತ ಕೇಳಿದೆ, ವಾಕಿಂಗ್ ನೆಪದಲ್ಲಿ ಸುಮ್ಮನೆ ಮಳೆಯಲ್ಲಿ ಮನಸೋ ಇಚ್ಛೆ ನೆನೆದೆ. ರಾತ್ರಿ ಮಲಗಿದರೆ ನಿದ್ರೆ ಹತ್ತಿರವೂ ಸುಳಿಯಲಿಲ್ಲ. ರಾತ್ರಿಯಿಡೀ ಅದೇ ಅಲೋಚನೆ ಮತ್ತೆ ಮತ್ತೆ ಕಾಡುತ್ತಲೇ ಇತ್ತು.

ನನ್ನ ಗುರುಗಳು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಸಮಾಜದಲ್ಲಿ ಜನರು ವ್ಯಕ್ತಿಗಳನ್ನು ಟಿಷ್ಯೂವಿನ ಹಾಗೆ ಬಳಸಿಕೊಂಡು ಬಿಸಾಡುವುದೇ ಹೆಚ್ಚು ಎಂದು. ಅದು ಅಕ್ಷರಶಃ ಅನುಭವಕ್ಕೆ ಬರುತ್ತಿದೆ. ನಿನ್ನ ನಡವಳಿಕೆ ನನ್ನ ಸ್ಥಳ ಯಾವುದು ಎಂಬುದನ್ನು ಸ್ಪಷ್ಟಪಡಿಸುತ್ತಿರುವ ಹಾಗೆ ಗೋಚರವಾಗುತ್ತಿದೆ. ಅದಕ್ಕೇ ಇರಬೇಕು ಇತ್ತೀಚೆಗೆ ನನಗೆ ಮನುಷ್ಯರ ಜೊತೆಗಿನ ಸಂಬಂಧ ಬೇಸರದ ಜೊತೆಗೆ ವಿಶ್ವಾಸಘಾತುಕವೆನಿಸುತ್ತಿದೆ. ಈ ಜಗತ್ತಿನ ಸಂಬಂಧ ಕಳಚಿಕೊಳ್ಳುವ ಹಂಬಲ ಹೆಚ್ಚಾಗುತ್ತಿದೆ.

ನೀನು ಯಾವಾಗಲೂ ನನಗೆ ಹೇಳುತ್ತಿದ್ದೆ ನೆನಪಿದೆಯಾ, ವಾಸ್ತವವಾಗಿ ಪ್ರಸವ ವೇದನೆ ಹೇಗಿರುತ್ತದೆ ಎಂಬ ಸಣ್ಣ ಅನುಭವವೂ ನಿನಗಿಲ್ಲ ಎಂದು. ಆದರೆ, ನಿನ್ನೆ ರಾತ್ರಿಯಿಂದ ಭಾವನೆಗಳ ಪ್ರಸವ ವೇದನೆ ಒತ್ತರಿಸಿ, ಒತ್ತರಿಸಿ ಬರುತ್ತಿತ್ತು. ಹಾಗಾಗಿ ಆ ವೇದನೆಯಿಂದ ತಪ್ಪಿಸಿಕೊಳ್ಳಬೇಕಾದರೆ ಬರವಣಿಗೆಯೊಂದೇ ದಾರಿ ಎಂದು ಖಾತ್ರಿಯಾಯಿತು. ಹಾಗಾಗಿಯೇ ಇಷ್ಟೆಲ್ಲಾ ಹೇಳಬೇಕಾಯಿತು. ಈಗ ಮನಸ್ಸು ಸ್ವಲ್ಪ ಹಗೂರವಾದಂತೆ ಭಾಸವಾಗುತ್ತಿದೆ. ಆದರೂ ಮನಸ್ಸು ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತಿದೆ. ನನ್ನ ಅಸ್ಥಿತ್ವ ಕೇವಲ ಕಸಬುಟ್ಟಿ ಅಷ್ಟೇನಾ ಎಂದು?

ನೀನು ಅದೆಷ್ಟೇ ಸಬೂಬು ನೀಡಿದರೂ ಬಹುಶಃ ವಾಸ್ತವ ಇದೇ ಇರಬಹುದು ಎಂದೇ ಅನಿಸುತ್ತಿದೆ. ಹಾಗೆಂದು ನಿನ್ನಿಂದ ಏನನ್ನೂ ಬಯಸುವ ಅಭ್ಯಾಸ ನನಗಿಲ್ಲ. ಹಾಗಾಗಿ ನಿರ್ಲಿಪ್ತತೆ ಕಡೆಗೆ ಸಾಗಲು ಸಿದ್ಧತೆ ನಡೆಸುತ್ತಿದ್ದೇನೆ. ಮತ್ತೊಮ್ಮೆ ಮನಸ್ಸಿನ ಕಡಲಿನಲ್ಲಿ ಅಲೆಗಳನ್ನು ಬಡಿದೇಳಿಸಬೇಡ, ತಡೆದುಕೊಳ್ಳುವ ಕಸುವು ಉಳಿದಿಲ್ಲ ಎಂದಷ್ಟೇ ಹೇಳಬೇಕು ಎನಿಸುತ್ತಿದೆ. ನಾಳೆಯೋ, ನಾಡಿದ್ದೋ ಮತ್ತೊಮ್ಮೆ ಕರೆ ಮಾಡಿ ಸಹಾಯ ಕೇಳಿದರೆ ಅದೇ ಉತ್ಸಾಹದಲ್ಲಿ ಕೆಲಸಕ್ಕೆ ಸಿದ್ಧಳಾಗುತ್ತೇನೆ. ಅಲ್ಲಿಯವರೆಗೂ ನನ್ನಷ್ಟಕ್ಕೇ ನಾನು ಇದ್ದುಬಿಡುತ್ತೇನೆ ಜೀವಂತ ಶವದ ಹಾಗೆ.

Friday, July 12, 2024

ಮಳೆ ಅವಾಂತರ ಮತ್ತು ಕಸಿನ್ಸ್‌ ಜೊತೆಗೆ ಮಡಿಕೇರಿ ಪ್ರವಾಸ

ಅದೊಂದು ದಿನ ವಾಟ್ಸಾಪ್‌ನಲ್ಲಿ ಕಸಿನ್ಸ್‌ ಗ್ರೂಪ್‌ ಎಂದು ಕ್ರಿಯೇಟ್‌ ಆಗಿತ್ತು. ಆ ಹೊತ್ತಿಗೆ ನಾನು ಬಹಳ ಅನ್ಯ ಮನಸ್ಕಳಾಗಿದ್ದೆ. ಕೆಲಸದ ಒತ್ತಡ, ಬದುಕಿನ ಜಂಜಾಟ, ಬೇಡದ ಆಲೋಚನೆಗಳು ಮನಸ್ಸಿನ ತುಂಬಾ ಹುಚ್ಚೆದ್ದು ಕುಣಿಯುತ್ತಿದ್ದವು. ಹಾಗಾಗಿ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ದಿನ ಕಳೆದಂತೆ ವಾಟ್ಸಾಪ್‌ ಬಹಳ ಆಕ್ವೀವ್‌ ಆಗಲು ಪ್ರಾರಂಭಿಸಿತು. ನಾವು ೧೦ ಜನ ಕಸಿನ್ಸ್‌ ಇದ್ದೀವಿ. ಒಂದಷ್ಟು ಜನ ಅಲ್ಲಿ, ಇಲ್ಲಿ ಎಂದು ಬಹಳ ಜೋರಾಟ ಉಸುರುತ್ತಿದ್ದರು. ಆದರೆ ನಾನು ನನ್ನದೇ ಜಗತ್ತಿನಲ್ಲಿ ಮುಳುಗಿದ್ದರಿಂದ ಅದಾವುದರ ಕಡೆಗೂ ಹೆಚ್ಚು ಗಮನ ಕೊಡಲಿಲ್ಲ.

ಆರಂಭ ಶೂರತ್ವ ಎಂಬಂತೆ ಎಲ್ಲರೂ ಅವರಿಗೆ ತೋಚಿದ ಸ್ಥಳಗಳನ್ನು ಪಟ್ಟಿ ಮಾಡುತ್ತಾ ಹೋದರು. ಮಂಗಳೂರಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದರಿಂದ ಪ್ರವಾಸದ ಚಿಂತನೆಯೇ ಮನಸ್ಸಿನಲ್ಲಿ ಸುಳಿಯಲಿಲ್ಲ. ಕೆಲವರು ಬೀಚ್‌, ಟ್ರಕ್ಕಿಂಗ್‌ ಎಂದೆಲ್ಲಾ ಸಲಹೆ ನೀಡುತ್ತಿದ್ದರು. ಮಳೆ ಕಾರಣಕ್ಕಾಗಿ ಈ ಯಾವ ಸ್ಥಳಕ್ಕೂ ಭೇಟಿ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಕಡ್ಡಿ ಎರಡು ತುಂಡು ಮಾಡಿದಂತೆ ಹೇಳಿಬಿಟ್ಟೆ. ಹಾಗಾಗಿ ಕೆಲವರಿಗೆ ನನ್ನ ಬಗ್ಗೆ ಸ್ವಲ್ಪ ಅಸಹನೆಯೂ ಮೂಡದೇ ಇಲ್ಲ. ಅಷ್ಟರಲ್ಲಾಗಲೇ ವರುಣ ರುದ್ರ ರೂಪ ತೋರಲು ಮುಂದಾಗಿದ್ದರಿಂದ ಹೀಗೆ ಮಾತಾಡುವುದು ಅನಿವಾರ್ಯವಾಗಿತ್ತು.

ಕೊನೆಗೆ ಒಂದೆರಡು ಸ್ಥಳಗಳನ್ನು ಅಂತಿಮ ಸುತ್ತಿಗೆ ತಂದು ವಾಟ್ಸಾಪ್‌ ಪೋಲಿಂಗ್‌ ಶುರು ಮಾಡಿದರು. ಹೆಚ್ಚು ಮತ ಗಳಿಸಿದ ಮಡಿಕೇರಿ ವಿಜಯಶಾಲಿಯಾಯಿತು. ಅದಕ್ಕಾಗಿ ಸಾಕಷ್ಟು ಸುತ್ತಿನ ವಾಟ್ಸಾಪ್‌ ವಿಡಿಯೋ ಮಾತುಕತೆ ಎಲ್ಲವೂ ನಡೆಯಿತು. ಆರಂಭದ ಒಂದೆರಡು ಕರೆಗಳಲ್ಲಿ ನಾನು ಭಾಗಿಯಾಗಲು ಸಾಧ್ಯವಾಗಲಿಲ್ಲ. ಆದರೆ ಅಂತಿಮ ಹಂತದ ಕರೆಗೆ ಭಾಗವಹಿಸಿದೆ. ಎಲ್ಲವೂ ಸುಸೂತ್ರವಾಯಿತು ಎನ್ನುವಷ್ಟರಲ್ಲಿ ಒಂದೆರಡು ವಿಕೆಟ್‌ ಪತನ ಆರಂಭವಾಯಿತು.

ಪತನವಾದ ವಿಕೆಟ್‌ಗಳನ್ನು ಮತ್ತೆ ಕ್ರೀಸ್‌ಗೆ ತರಲು ಸಾಕಷ್ಟು ಮನವೊಲಿಕೆ ಮಾಡಿದರೂ ಪ್ರಯೋಜನಕ್ಕೆ ಬರಲಿಲ್ಲ. ಹಾಗಾಗಿ ಕೊನೆಗೆ ಮತ್ತೊಂದು ಗ್ರೂಪ್‌ ಹುಟ್ಟಿಕೊಂಡಿತು. ಅಲ್ಲಿಗೆ ಉಳಿದದ್ದು ೫ ಮಂದಿ ಮಾತ್ರ. ಮಡಿಕೇರಿ ಸುತ್ತಮುತ್ತಲಿನ ಸ್ಥಳ ವೀಕ್ಷಣೆ ಮತ್ತು ಮೋಜು ಮಸ್ತಿ ಎಂದು ಎರಡು ದಿನದ ಪ್ರವಾಸ ಎಂದು ಅಂತಿಮವಾಗಿ ತೀರ್ಮಾನವಾದ ನಂತರವೂ ಅಸ್ಥಿರತೆಯ ನಡುವೆಯೂ ಎಲ್ಲವೂ ಫಿಕ್ಸ್‌ ಆಗಿತ್ತು. ಇನ್ನೇನು ಹೊರಟುವ ಮುನ್ನಾ ದಿನ ವರುಣನಿಗೆ ಅದಕೋ ಮುನಿಸು ತುಸು ಹೆಚ್ಚೇ ಆಯಿತು. ವರುಣನಿಗೆ ಸಾಥ್‌ ಕೊಟ್ಟ ಮೋಡಗಳು ಮರೆಯಾಗಲೇ ಇಲ್ಲ. ನಿರಂತರ ಜಡಿ ಮಳೆ ಬಿಟ್ಟೂ ಬಿಡದೇ ಸುರಿಯಲು ಆರಂಭಿಸಿತು.


ಕರಾವಳಿ ಭಾಗದ ಜನತೆಗೆ ಮಳೆ ಹೊಸದೇನೂ ಅಲ್ಲ. ಅದೊಂದು ಉಪ್ಪಿನಕಾಯಿ ಇದ್ದ ಹಾಗೆ, ರುಚಿಗೆ ಇದ್ದರೇನೇ ಊಟಕ್ಕೆ ಮೆರಗು. ಒಲ್ಲದ ಮನಸ್ಸಿನಿಂದಲೇ ನಾನು ಕೂಡ ತುಸು ಚುರುಕಾಗಿ ಹೊರಟು ನಿಂತೆ. ಹಿಂದಿನ ದಿನ ಬೆಳಗ್ಗೆ ಬಿಡುವಿದ್ದ ಕಾರಣ ಬಹಳ ಅಳೆದುತೂಗಿ ಬಟ್ಟೆಬರೆ ಎಲ್ಲವನ್ನೂ ಪ್ಯಾಕ್‌ ಮಾಡಿದೆ. ಬಿರುಸು ಮಳೆ ಜೊತೆಗೇ ಕಾಲೇಜಿಗೆ ಹೋಗಿ ಪರೀಕ್ಷಾ ಕೆಲಸವನ್ನು ಮುಗಿಸಿ ಬಂದೆ. ನಾಳೆ ಹೊರಡುವ ಸಂಭ್ರಮಕ್ಕೋ ಅಥವಾ ಕಾಲೇಜಿನಲ್ಲಿ ಕೇಳಿದ ಆ ಒಂದು ಮಾತಿಗೋ ಮನಸ್ಸು ತುಸು ಹೆಚ್ಚೇ ಬಾಡಿತ್ತು. ಬಹಳ ಭಾರವಾಗಿ ಮನೆಗೆ ಬಂದೆ.

ಆದರೂ ಬೆಳಗ್ಗೆ ೩ ಗಂಟೆಗೆ ಅಲಾರಂ ಫಿಕ್ಸ್‌ ಮಾಡಿ ಮಲಗಿದೆ. ಹೊರಗೆ ಮಳೆ ಜಿಟಿ ಜಿಟಿ ಎಂದು ಸುರಿಯುತ್ತಲೇ ಇತ್ತು. ರಾತ್ರಿಯಿಡೀ ಮಳೆ ಹಿಡಿದಿದ್ದರಿಂದ ಕರೆಂಟ್‌ ಕೈ ಕೊಟ್ಟಿತ್ತು. ಅಯ್ಯೋ ಎಂದು ಗ್ಯಾಸ್‌ನಲ್ಲೇ ಬಿಸಿ ನೀರು ಕಾಯಿಸಿ ಸ್ನಾನ ಮಾಡಿ ರೆಡಿಯಾಗುತ್ತಿದ್ದೆ. ಮತ್ತೆ ವರುಣ ರುದ್ರ ರೂಪಕ್ಕೆ ಇಳಿದೇ ಬಿಟ್ಟ. ಅದೇನೇ ಆಗಲೀ ಹೊರಡುವುದೇ ಎಂದು ಗಟ್ಟಿ ಮನಸ್ಸು ಮಾಡಿ ಕೆಳಗೆ ಪಾರ್ಕಿಂಗ್‌ ಲಾಟ್‌ ಬಳಿ ನಿಂತರೆ ಗೇಟ್‌ ತೆರೆಯಲೂ ಹೆಜ್ಜೆ ಮುಂದೆ ಹೋಗದೇ ಮನಸ್ಸು ಹಿಂದೇಟು ಹಾಕಲು ಪ್ರಾರಂಭಿಸಿತು. ಅದೇಕೋ ಗೊತ್ತಿಲ್ಲ ಮನಸ್ಸು ಕಾಲೇಜಿನಲ್ಲಿ ಕೇಳಿದ ಆ ಮಾತನ್ನು ಮತ್ತೆ ಮತ್ತೆ ನೆನಪು ಮಾಡುತ್ತಲೇ ಇತ್ತು. ಆ ವೇಳೆಗಾಗಲೇ ಬೆಳಗ್ಗೆ ೪.೩೦ ದಾಟಿತ್ತು.

ನಿಲ್ಲದ ವರುಣನ ಆರ್ಭಟ, ಮನಸ್ಸಿನಲ್ಲಿ ಕೊರೆಯುತ್ತಿದ್ದ ಆ ಮಾತು ಎಲ್ಲದರಿಂದಾಗಿ ಸುಮ್ಮನೆ ಮತ್ತೆ ಮೇಲೆ ಬಂದು ವಾಟ್ಸಾಪ್‌ನಲ್ಲಿ ಮಳೆ ಕಾರಣದಿಂದಾಗಿ ಮಡಿಕೇರಿ ಪ್ರವಾಸಕ್ಕೆ ಬರುತ್ತಿಲ್ಲ ಎಂದು ತಿಳಿಸಿ ಮತ್ತೆ ಹಾಸಿಗೆ ಮೇಲೆ ಎರಗಿದೆ. ಕನಸಿನಲ್ಲಿ ಮಡಕೇರಿಯ ದರ್ಶನವಾಯಿತಾದರೂ, ಮಳೆ ಮಾತ್ರ ಸುರಿಯುತ್ತಲೇ ಇತ್ತು. ಪ್ಯಾಕ್‌ ಮಾಡಿಟ್ಟ ಬ್ಯಾಗ್‌ ಮೂಲೆ ಸೇರಿಕೊಂಡು ನಿನ್ನ ಯೋಗ್ಯತೆ ಇಷ್ಟೇ ಎಂದು ಅಣಕಿಸಿದ್ದು ಮಾತ್ರ ಸುಳ್ಳಲ್ಲ.

Thursday, January 18, 2024

ವಿಭಿನ್ನ ಅನುಭವದ ಸ್ಕೂಬಾ ಡೈವಿಂಗ್

ಬದುಕಿನಲ್ಲಿ ಆಗಾಗ ಸ್ವಲ್ಪ ವಿಭಿನ್ನವಾದ ಹಾಗೂ ಹೊಸ ಹೊಸ ಸಾಹಸಗಳಿಗೆ ಕೈ ಹಾಕಬೇಕು ಅನ್ನೋದು ನನ್ನ ಅಲೋಚನೆ. ಅದೇ ಕಾರಣಕ್ಕೆ ಸಮಯ ಸಿಕ್ಕಾಗಲೆಲ್ಲಾ ಏನಾದರೂ ಹೊಸ ಪ್ರಯೋಗ ಮಾಡುತ್ತಲೇ ಇರುತ್ತೇನೆ. ಈ ಬಾರಿಯೂ ಏನಾದರೂ ಹೊಸತನ್ನು ಮಾಡಬೇಕು ಎಂದು ಬಹಳ ದಿನಗಳಿಂದ ಯೋಜನೆ ಹಾಕಿದ್ದೇ ಬಂತು, ಆದರೆ ಕಾರ್ಯರೂಪಕ್ಕೆ ತರಲಾಗಲಿಲ್ಲ. 



ಕೊನೆಗೆ ಒಂದು ದಿನ ಬ್ಯಾಗ್ ಏರಿಸಿಕೊಂಡು ಹೊರಟೇ ಬಿಟ್ಟೆ. ಹೊರಡುವಾಗ ನಾನೂ ಸ್ಕೂಬಾ ಡೈವಿಂಗ್ ಮಾಡುತ್ತೇನೆ ಎಂಬ ಖಾತ್ರಿ ಮಾತ್ರ ಇರಲಿಲ್ಲ. ಗೆಳೆಯನ ಸಲಹೆ ಮೇರೆಗೆ ಒಮ್ಮೆ ಪ್ರಯತ್ನ ಮಾಡೋಣ ಎಂದು ಮುಂದಾದೆ. 

ಹಾಗಾಗಿ ಮುರುಡೇಶ್ವರದಲ್ಲಿರುವ ರೀಫ್ ಅಡ್ವೆಂಚರ್ಸ್ ಸ್ಕೂಬಾ ಡೈವಿಂಗ್ ತಲುಪಿದೆ. ಹೋಗುವಾಗ ಬಹಳ ಕೌತುಕ, ಆಶ್ಚರ್ಯ ಎಲ್ಲವೂ ಮನದಲ್ಲಿ ಇತ್ತು. ಸ್ಕೂಬಾ ಡೈವಿಂಗ್ ನಡೆಸುವ ಮಾಲೀಕರು ಬೆಳಗ್ಗೆ 8.30ರ ಒಳಗಾಗಿ ಮುರುಡೇಶ್ವರದಲ್ಲಿದ್ದರೆ ಉತ್ತಮ ಎಂದರು ಎಂಬ ಕಾರಣಕ್ಕಾಗಿ ಲಗುಬಗೆಯಿಂದಲೇ ಎದ್ದು ಸಿದ್ಧಳಾಗಿ ಹೊರಟೆ. 


ಈ ಮೊದಲು ಟ್ರಕ್ಕಿಂಗ್ ಮಾಡಿದ ಅನುಭವ ಮಾತ್ರವೇ ನನಗಿತ್ತು. ಆದರೆ ನೀರಲ್ಲಿ ಈಜಿದ ಅಥವಾ ಸ್ಕೂಬಾ ಡೈವಿಂಗ್ ನಂತಹ ಸಾಹಸ ಮಾಡಿ ತಿಳಿದಿರಲಿಲ್ಲ. ಅದೇ ಕಾರಣಕ್ಕಾಗಿ ಆ ಸಾಹಸಕ್ಕೆ ಕೈ ಹಾಕಿದ್ದೆ. ಮನಸ್ಸು ಶಾಂತವಾಗಿತ್ತು. ಯಾವುದೇ ಆತಂಕ, ಭಯ ಇರಲಿಲ್ಲ. 

ರೀಫ್ ಅಡ್ವೆಂಚರ್ಸ್ ತಲುಪುವುದರೊಳಗೆ ಒಂದಷ್ಟು ಸಾಹಸಿಗಳು ಬಂದಿದ್ದರು. ಒಂದಷ್ಟು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಬೋಟ್ ಮೂಲಕ ನೇತ್ರಾಣಿ ದ್ವೀಪಕ್ಕೆ ತೆರಳಬಹುದು ಎಂದು ಹೇಳಿದರು. ಸರಿ ಎಂದು ದೇವಸ್ಥಾನದ ಪಕ್ಕದ ಬಳಿ ಇರುವ ಸಮುದ್ರವನ್ನು ಸುಮ್ಮನೆ ನೋಡುತ್ತಾ ನಿಂತೆ. 

ಚಳಿಗಾಲವಾದ್ದರಿಂದ ಅಲೆಗಳ ಅಬ್ಬರ ಅಷ್ಟಾಗಿರಲಿಲ್ಲ. ಸಮುದ್ರವೂ ಶಾಂತವಾಗಿತ್ತು. ಪಕ್ಕದಲ್ಲಿ ಪ್ರತಿಷ್ಠಾಪಿಸಿದ ಶಿವನೂ ಧ್ಯಾನದಲ್ಲಿ ಮಗ್ನನಾಗಿದ್ದ. ಹಾಗಾಗಿ ಬೆಳಗಿನ ಬೆರಗು ಶಾಂತವಾದ ಭಾವವನ್ನು ಹೊರಸೂಸುತ್ತಿತ್ತು. 

ಅಡ್ವೆಂಚರ್ಸ್ ತಂಡದವರು ಲಗುಬಗೆಯಿಂದಲೇ ಬೋಟ್ಗೆ ಸಾಮಾನುಗಳನ್ನು ತುಂಬುವ ಕೆಲಸದಲ್ಲಿ ತೊಡಗಿದ್ದರು. ಅವರೆಲ್ಲರ ಮುಖದಲ್ಲೂ ಎಂದಿನ ಏಕತಾನತೆ ಬದಲಾಗಿ ಹೊಸ ಸಾಹಸಕ್ಕೆ ಹೊರಟು ನಿಂತ ವೀರರಂತೆ ಕಾಣುತ್ತಿದ್ದರು. ಉತ್ಸಾಹ ಚಿಮ್ಮುತ್ತಿತ್ತು. ಸುಮಾರು 10.30ರ ವೇಳೆಗೆ ಬೋಟ್ ನೇತ್ರಾಣಿ ತಟಕ್ಕೆ ಹೊರಟಿತು. 

ಸ್ಕೂಬಾ ಡೈವಿಂಗ್ ಮಾಡಲು ಸುಮಾರು 40 ಜನರು ಸಿದ್ಧರಾಗಿ ಬಂದಿದ್ದರು. ಅವರುಗಳೆಲ್ಲರ ಮಧ್ಯೆ ನಾನೂ ಸೇರಿಕೊಂಡಿದ್ದೆ. ಮುರುಡೇಶ್ವರದಿಂದ ಸುಮಾರು ಒಂದುವರೆ ಗಂಟೆ ಸಮುದ್ರದಲ್ಲಿ ಪ್ರಯಾಣ ಮಾಡಿದ ನಂತರ ಸ್ಕೂಬಾ ಡೈವಿಂಗ್ ಮಾಡುವ ಸ್ಥಳಕ್ಕೆ ತಲುಪಿದೆವು. ಅಲ್ಲಿದ್ದ ಎಲ್ಲರಿಗೂ ನೀರಿನೊಳಗೆ ಧುಮುಕುವ ತವಕ. ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ಗೆ ಹೋಗಿದ್ದರಿಂದ ಒಂದಷ್ಟು ಕುತೂಹಲ ಸಹಜವಾಗಿಯೇ ಇತ್ತು. 

ಸ್ಕೂಬಾ ಡೈವಿಂಗ್ ತರಬೇತುದಾರರು ಅಲ್ಲಿದ್ದ ಎಲ್ಲರಿಗೂ ಸ್ಕೂಬಾ ಡೈವಿಂಗ್ ಮಾಡುವ ಸಂದರ್ಭದಲ್ಲಿ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒಂದಷ್ಟು ಮಾರ್ಗದರ್ಶನ ನೀಡಿದ ನಂತರ ಬೋಟ್ ನಿಂದ ನೀರಿಗೆ ಹಾರಿದ್ದರು. 

ಹೀಗೆ, ತರಬೇತುದಾರರು ಒಬ್ಬರಾದ ನಂತರ ಮತ್ತೊಬ್ಬರು ನೀರಿಗೆ ಹಾರಿದ ನಂತರ ನಮ್ಮಗಳ ಸರದಿ ಆರಂಭವಾಯಿತು. ಇಡೀ ತಂಡದಲ್ಲಿ ನಾನೇ ಮೊದಲಿಗನಾಗಿದ್ದೆ. ಆಕ್ಸಿಜನ್ ಸಿಲಿಂಡರ್, ಪವರ್ ಮಾಸ್ಕ್ ಹಾಕಿಕೊಂಡು ಮಾನಸಿಕವಾಗಿ ತಯಾರಿ ಮಾಡಿಕೊಳ್ಳುವ ಮುನ್ನವೇ ನೀರಿಗೆ ನನ್ನನ್ನು ತಳ್ಳಿಬಿಟ್ಟಿದ್ದರು. ಒಂದು ಕ್ಷಣಕ್ಕೆ ಏನಾಗುತ್ತಿದೆ ಎಂದು ಅರಿಯುವುದರ ಒಳಗಾಗಿ ನೀರಿನಲ್ಲಿ ಒಂದು ರೌಂಡ್ ಹಾಕಿ ಆಗಿತ್ತು. 

ಹಿಂದೆ ಮುಂದಾಗಿ ಬಿದ್ದಿದ್ದರಿಂದಲೋ ಅಥವಾ ಅಷ್ಟೊಂದು ಎತ್ತರದಲ್ಲಿ ಹರಿಯುತ್ತಿರುವ ನೀರನ್ನು ನೋಡಿದ ಕಾರಣಕ್ಕೋ ಏನೋ ಮನಸ್ಸಿನಲ್ಲಿ ಭಯ ಮಡುಗಟ್ಟಿ ಬಿಟ್ಟಿತ್ತು. 



ಸ್ಕೂಬಾ ಡೈವಿಂಗ್ ತರಬೇತುದಾರರು ನನ್ನನ್ನು ಶಾಂತಗೊಳಿಸಲು ಸಾಕಷ್ಟು ಬಾರಿ ಪ್ರಯತ್ನ ಮಾಡಿದರೂ ತಹಬಂಧಿಗೆ ಬರಲೇ ಇಲ್ಲ. ಮುಳುಗಿ ಬಿಡುತ್ತೇನೆ ಎಂಬ ಭಯವೂ ಅಥವಾ ಉಸಿರಾಡಲಯ ಕಷ್ಟವಾಗುತ್ತಿದೆ ಎಂಬ ಆತಂಕವೋ ಗೊತ್ತಿಲ್ಲ. ಆದರೆ ಭಯದಿಂದ ಅಕ್ಷರಶಃ ನಡುಗುತ್ತಿದ್ದೆ. 

ಸುಮಾರು 10-15  ನಿಮಿಷಗಳ ಕಾಲ ನೀರಿನಲ್ಲಿ ಈಜಲೂ ಆಗದೇ, ಸಮುದ್ರದ ಆಳವನ್ನು ಸರಿಯಾಗಿ ನೋಡಲೂ ಆಗದೇ ಒದ್ದಾಡಿ ಬಿಟ್ಟದ್ದು ಮಾತ್ರ ಸುಳ್ಳಲ್ಲ. ಇದೆಲ್ಲದರ ಮಧ್ಯೆ ಒಂದಷ್ಟು ಫೋಟೊ, ವೀಡಿಯೋಗೆ ಫೋಸ್ ಕೊಟ್ಟು ನೀರಿನ ಮೇಲೆ ತೇಲಾಡಿಕೊಂಡು ಬೋಟ್ ಹತ್ತಿದೆ. ಆಗಲೇ ಹೋದ ಜೀವ ಮತ್ತೆ ಬಂದಂತಾಗಿತ್ತು. ಅಲ್ಲಿಯವರೆಗೂ ಅದೊಂದು ರೀತಿಯ ಭಯ ನನ್ನಲ್ಲಿ ಬಹಳವಾಗಿ ಕಾಡಿತ್ತು. 

ಆದರೂ ಸ್ಕೂಬಾ ಡೈವಿಂಗ್ ಒಂಥರಾ ವಿಭಿನ್ನ ಅನುಭವವನ್ನು ಕೊಟ್ಟಿದ್ದು ಮಾತ್ರ ಸುಳ್ಳಲ್ಲ. ಏನಾದರೂ ಹೊಸತನ್ನು ಮಾಡಬೇಕು ಎಂಬ ಬಯಕೆಯೂ ತಣಿದಿತ್ತು. ಆದರೆ ಎಲ್ಲೋ ಒಂದು ಅವ್ಯಕ್ತ ಭಯದಿಂದ ಸರಿಯಾಗಿ ಸ್ಕೂಬಾ ಡೈವಿಂಗ್ ಮಾಡಲಾಗಲಿಲ್ಲ ಎಂಬ ಬೇಜಾರೂ ಕಾಡಿತ್ತು. 



ಬೋಟ್ ಮೇಲೆ ನಿಂತು ಸಮುದ್ರ ಹಾಗೂ ಸೂರ್ಯನ ಕಿರಣಗಳನ್ನು ಆಸ್ವಾದಿಸುತ್ತಾ ನಿಂತೆ. ಸ್ವಲ್ಪ ಸಮಯದ ನಂತರ ಮತ್ತೆ ಮುರುಡೇಶ್ವರದ ಕಡೆಗೆ ಬೋಟ್ ಹೊರಟಿತ್ತು. ಅಲ್ಲಿಗೆ ನೇತ್ರಾಣಿ ದ್ವೀಪಕ್ಕೆ ವಿದಾಯ ಹೇಳಿ ಚಳಿಯಲ್ಲಿ ನಡುಗುತ್ತಾ ಬೋಟ್ ಅಲೆಗಳ ಹೊಡೆತಕ್ಕೆ ಸಿಕ್ಕಿ ಅಲುಗಾಡುತ್ತಾ ಸಾಗಿದಂತೆ ನಮ್ಮ ಪಯಣವೂ ಸಾಗಿತ್ತು. 


Tuesday, November 14, 2023

ವಿದಾಯ ಪತ್ರ


ಆತ್ಮೀಯ ವಿದ್ಯಾರ್ಥಿಗಳೇ, ನಿಮ್ಮ ಬದುಕಿನ ಅತ್ಯಂತ ಪ್ರಮುಖವಾದ ಘಟ್ಟ ಪದವಿ ಹಂತದ ಶಿಕ್ಷಣ ಮುಗಿಸಿ ವಾಸ್ತವವಾದ ಬದುಕಿನ ಕಡೆಗೆ ಹೆಜ್ಜೆ ಇಡುತ್ತಿರುವ ನಿಮಗೆಲ್ಲರಿಗೂ ಶುಭವಾಗಲಿ. ಅನಿವಾರ್ಯ ಕಾರಣಗಳಿಂದಾಗಿ ನಾನು ನಿಮ್ಮೆಲ್ಲರನ್ನು ಕುರಿತು ಮಾತನಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆ ಇರಲಿ. ಆದರೆ, ನಾನು ಹೇಳಲೇಬೇಕೆನಿಸಿದ ವಿದಾಯದ ಮಾತುಗಳನ್ನು ಈ ಮೂಲಕ ಹೇಳುತ್ತಿದ್ದೇನೆ. ಕೊರೊನಾದಂತಹ ಕೆಟ್ಟ ಕಾಲಘಟ್ಟದಲ್ಲಿ ನಾವೆಲ್ಲರೂ ಭೆಟಿ ಮಾಡಬೇಕಾಯಿತು. ಆದರೆ ಸಮಯ ಹಾಗೆಯೇ ಇರಲಿಲ್ಲ; ಬದಲಾಯಿತು. ಕತ್ತಲು ಕವಿದು ಬೆಳಕಿನ ಕಿರಣಗಳು ಒಂದೊಂದಾಗಿ ಕಾಣಿಸಿಕೊಳ್ಳತೊಡಗಿತು. ಬದುಕು ಸಹಜ ಸ್ಥಿತಿಯತ್ತ ಮರಳಿತು. ನಮ್ಮ ಪ್ರಯಾಣವೂ ಸಾಗುತ್ತಲೇ ಬಂದು, ಅಂತಿಮವಾಗಿ ಇಂದು ಇಲ್ಲಿಗೆ ನಿಂತಿದೆ. ಆರಂಬದ ಜೊತೆಗೆ ಅಂತ್ಯವೂ ಇರುತ್ತದೆ. ಹಾಗೆಂದ ಮಾತ್ರಕ್ಕೆ ಹೊಸ ಆರಂಭವೇ ಇಲ್ಲವೆಂದಲ್ಲ.

ಪದವಿ ಶಿಕ್ಷಣ ಮುಗಿದಿದೆ, ಇಂದಿನಿಂದ ನಿಮ್ಮ ಬದುಕಿನ ನಿಜವಾದ ಪ್ರಯಾಣ ಪ್ರಾರಂಭವಾಗುತ್ತಿದೆ. ಇದುವರೆಗೆ ಕಾಣದ ಲೋಕವೊಂದು ನಿಮಗೆ ಇನ್ನು ಮುಂದಿನ ದಿನಗಳಲ್ಲಿ ತೆರೆದುಕೊಳ್ಳಲಿದೆ. ಅದಕ್ಕಾಗಿಯೇ ಈ ಮೂರು ವರ್ಷದ ಸಿದ್ಧತೆ. ಸಿದ್ಧತೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ನಿಮಗೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಆದರೆ ನನ್ನ ನಂಬಿಕೆ ಎಂದಿಗೂ ಬದುಕು ಎಂಬ ಕಟ್ಟಡಕ್ಕೆ ಪದವಿ ಶಿಕ್ಷಣ ಎಂದಿಗೂ ಅಡಿಪಾಯ ಇದ್ದ ಹಾಗೆ. ಅಡಿಪಾಯ ಭದ್ರವಾಗಿದ್ದಷ್ಟು ಮಾತ್ರವೇ ಕಟ್ಟಡ ಸುಭದ್ರವಾಗಿರಲು ಸಾಧ್ಯ. ಹಾಗಾಗಿ ಅದು ಹೆಚ್ಚು ಶಿಸ್ತುಬದ್ಧವಾಗಿ, ವ್ಯವಸ್ಥಿತವಾಗಿರಬೇಕು ಎಂಬುದು ನನ್ನ ಧೋರಣೆ.

ಶಿಕ್ಷಣ ಕೇವಲ ಕಲಿಕೆಯಷ್ಟೇ ಅಲ್ಲ, ಅರ್ಥೈಸಿಕೊಳ್ಳುವಿಕೆ, ಅರಿವಿನ ಮಟ್ಟದ ಸಧಾರಣೆಯೂ ಆಗಬೇಕು. ಅದು ಆಗುವುದು ಪದವಿ ಹಂತದ ಶಿಕ್ಷಣದಲ್ಲಿ ಮಾತ್ರ. ಪದವಿ ಪೂರೈಸಿದೆವು ಎಂದರೆ ಅದು ಕೇವಲ ಮುಂದಿನ ಹಂತದ ಶಿಕ್ಷಣಕ್ಕೆ ಮಾತ್ರ ರಹದಾರಿಯಲ್ಲ; ಇಡೀ ಬದುಕಿನ ಪಯಣಕ್ಕೆ ರಹದಾರಿ. ಹಾಗಾಗಿ ಮುಂದೆ ಬರುವ ಎಲ್ಲಾ ಕಷ್ಟ, ನೋವು, ದುಃಳ, ಸಂತೋಷ, ನಗು ಎಲ್ಲದಕ್ಕೂ ಈ ಹಂತದ ಶಿಕ್ಷಣವೇ ಅಡಿಪಾಯ ಎಂಬುದು ನನ್ನ ಬಲವಾದ ನಂಬಿಕೆ. ಅದೇ ಕಾರಣಕ್ಕಾಗಿ ನಿಮ್ಮ ಮುಂದಿನ ಬದುಕಿಗೆ ನಿಮ್ಮನ್ನು ತಯಾರಿ ಆಡಲು ನಾನು ಬಹಳ ಕಟುವಾಗಿ ನಡೆದುಕೊಳ್ಳಬೇಕಾಯಿತು. ಆಗ ಮಾತ್ರ ಅದು ನಮ್ಮ ಸುಪ್ತ ಮನಸ್ಸಿನಲ್ಲಿ ಆಳವಾಗಿ ಬೇರೂರಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ನಾಣು ಯಾವಾಗಲೂ ನಿಮ್ಮ ಜೊತೆಗೆ ಕಠಿಣವಾಗಿ ನಡೆದುಕೊಳ್ಳಬೇಕಾಯಿತು.

ಶಿಕ್ಷಕ ಕೇವಲ ಉಪನ್ಯಾಸಕನಷ್ಟೇ ಅಲ್ಲ; ಅವನೊಬ್ಬ ಬದುಕಿನ ದಾರಿ ತೋರಿಸುವವನು ಎಂಬುದನ್ನು ನನ್ನ ಗುರುಗಳು ನನಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವರ ಮತುಗಳನ್ನು, ಅವರ ಪಾಠಗಳನ್ನು ಹಾಗೂ ಬದುಕಿನಲ್ಲಿ ಗುರುಗಳ ಮುಖೇಣ ಕಲಿತದ್ದನ್ನು ಮುಂದಿನ ಪೀಳಿಗೆಗೆ ರವಾನೆ ಮಾಡುವ ಪೋಸ್ಟ್‌ ಮ್ಯಾನ್‌ ಕೆಲಸ ಮಾಡುದಕ್ಕಷ್ಟೇ ನನ್ನ ಕರ್ತವ್ಯ ಸೀಮಿತ ಎಂದು ಭಾವಿಸಿದ್ದೇನೆ. ಈ ವೃತ್ತಿಯಲ್ಲಿ ನಾನು ಅದೆಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇನೆ ಅಥವಾ ನಿಮ್ಮ ನಿರೀಕ್ಷೆಗೆ ಅದೆಷ್ಟು ನ್ಯಾಯ ಒದಗಿಸಿದ್ದೇನೆ ಎಂಬುದು ಈಗಲೂ ನನಗೆ ತಿಳಿದಿಲ್ಲ. ಆ ಮಟ್ಟಿಗೆ ದೊಡ್ಡ ಪ್ರಶ್ನೆ ಯಾವಾಗಲೂ ನನಗೆ ಕಾಡುತ್ತಲೇ ಇರುತ್ತದೆ. ಬಹುಶ ಅಷ್ಟರಮಟ್ಟಿಗೆ ಆತ್ಮಾವಲೋಕನ ನನಗೂ ಬೇಕಿದೆ. ಆಗ ಮಾತ್ರವೇ ನಾನೂ ಕೂಡ ಜೀವಂತವಾಗಿರುತ್ತೇನೆ ಎನಿಸುತ್ತದೆ.

ಒಂದಷ್ಟು ಕಠಿಣ ನಿಯಮ, ಬದ್ಧತೆ, ಶಿಸ್ತು, ಕ್ರಮಬದ್ಧತೆಗೆ ಮೊದಲ ಆದ್ಯತೆ ನೀಡುವುಸು ನನ್ನ ಸ್ವಭಾವ. ವೃತ್ತಿಯಲ್ಲೀ ಇದಕ್ಕೆ ಮಹತ್ವ ಇದ್ದೇ ಇರುತ್ತದೆ ನನ್ನ ಮಟ್ಟಿಗೆ. ಕಲಿಕೆ ಯಾವಾಗಲೂ ಕ್ರಮಬದ್ಧ, ವ್ಯವಸ್ಥಿತ ಹಾಗೂ ಶಿಸ್ತಿನಿಂದ ಕೂಡಿರಬೇಕು. ಇದು ನಮ್ಮ ಬದುಕಿಗೂ ಅಷ್ಟೇ ಮುಖ್ಯ ಎಂಬುದು ನನ್ನ ವಾದ. ಇದರಿಂದ ಸಾಕಷ್ಟು ಮನಸ್ತಾಪ, ಅಸಮಧಾನ, ಅಸಹಕಾರ ಎಲ್ಲವೂ ಎದುರಾಗಿದೆ. ಆದರೆ ಬದುಕು ನನಗಿಂತಲೂ ಕೆಟ್ಟ ಮೇಷ್ಟು ಎಂಬುದನ್ನು ಅರ್ಥ ಮಾಡಿಸುವುದಷ್ಟೇ ನನ್ನ ಉದ್ದೇಶವಾಗಿತ್ತು.

ಅಂತಹ ಕೆಟ್ಟ ಪರಿಸ್ಥಿತಿಗಳಿಗೂ ನೀವುಗಳು ಜಗ್ಗದೇ, ಕುಗ್ಗದೇ ಮುಂದೆ ಸಾಗಬೇಕು. ಅದಕ್ಕಾಗಿ ಈ ಪೂರ್ವತಯಾರಿ. ಪದವಿ ಪಾಸಾದರೂ, ನಪಾಸಾದರೂ ಪರವಾಗಿಲ್ಲ. ಬದುಕಿನ ಪರೀಕ್ಷೆಯಲ್ಲಿ ನನ್ನ ಮಕ್ಕಳಾರೂ ನಪಾಸಾಗಬಾರದು ಎಂದೇ ನಿಮ್ಮನ್ನು ಮೂರು ವರ್ಷ ತಯಾರು ಮಾಡಿದೆ. ಆದರೆ ಅದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದೇನೆ ಎಂಬುದು ಇಂದಿಗೂ ನನಗೆ ಖಾತ್ರಿಯಿಲ್ಲ. ಮತ್ತೂ ಒಂದಷ್ಟು ಕಲಿಸಬೇಕಿತ್ತು; ಅದನ್ನು ಕಲಿಸು ಸಾಧ್ಯವೇ ಆಗಲಿಲ್ಲವೇನೋ ಎಂಬ ಸಣ್ಣ ಅಳುಕು ಇಂದಿಗೂ ಮನದ ಮೂಲೆಯಲ್ಲಿ ಹಾಗೆಯೇ ಉಳಿದುಬಿಟ್ಟಿದೆ.

ಕಳೆದ ಮೂರು ವರ್ಷಗಳಲ್ಲಿ ಕಲಿಯಬೇಕಾದದ್ದೆಲ್ಲವನ್ನೂ ಕಲಿಯಲು ಬಹುಶಃ ಸಾಕಷ್ಟು ಮಂದಿಗೆ ಸಾಧ್ಯವಾಗಿರಲಿಕ್ಕಿಲ್ಲ ಅಥವಾ ಕಲಿಸುವಲ್ಲಿ ನನ್ನ ವೈಫಲ್ಯದ ಪಾಲೂ ಇದೆ ಎಂಬುದು ಚೆನ್ನಾಗಿ ತಿಳಿದಿದೆ. ಅದಕ್ಕಾಗಿ ಸಾಕಷ್ಟು ಪಶ್ಚಾತ್ತಾಪವೂ ಇದೆ. ಆದರೆ, ಪದವಿ ಮುಗಿದ ಮಾತ್ರಕ್ಕೆ ಬದುಕೇ ಮುಗಿದಿಲ್ಲ ಅಥವಾ ಶಿಕ್ಷಣವೇ ಮುಗಿಯಲಿಲ್ಲ. ವಾಸ್ತವ ಶಿಕ್ಷಣ, ಕಲಿಕೆ ಎಲ್ಲವೂ ಇಲ್ಲಿಂದ ಆರಂಭವಾಗಲಿದೆ. ನಿಗದಿತ ಗುರಿಯಿಂದ ವಿಚಲಿತರಾಗಬೇಡಿ. ಅದದೆಷ್ಟೇ ಕಷ್ಟ, ನಿರಾಶೆ ಅದೇನೇ ಆಗಲಿ ಛಲದಿಂದ ಸಾಧಿಸಿ ಧಕ್ಕಿಸಿಕೊಳ್ಳಿ. ಅದೇ ನಿಜವಾದ ಯಶಸ್ಸು. ಶ್ರದ್ಧೆ, ಶಿಸ್ತು, ವ್ಯವಸ್ಥಿತ ಕಲಿಕೆ, ಕ್ರಮಬದ್ಧತೆ ಇವೆಲ್ಲವೂ ನಿಮ್ಮ ಬದುಕಿನ ಉಸಿರಾಗಿರಲಿ.



ಕೊನೆಯದಾಗಿ, ಶ್ರೀಮಾತೆ ಶಾರದಾದೇವಿ ಮತ್ತು ರಾಮಕೃಷ್ಣ ಪರಮಹಂಸರ ಮಾತಿನೊಂದಿಗೆ ವಿದಾಯದ ಪತ್ರಕ್ಕೆ ಕೊನೆ ಹಾಡುತ್ತಿದ್ದೇನೆ.

ಕಷ್ಟಗಳನ್ನು ಪರಮಾತ್ಮನ ಕರುಣೆಯ ಕುರುಹು ಎಂದು ತಿಳಿ

ಸುಖಕ್ಕೆ ಮನಸೋಲಬೇಡ

ಕಷ್ಟಗಳು ಬರದೇ ನಿನ್ನ ಕೆಚ್ಚು ಕೆರಳದು

ಕೆಚ್ಚು ಕೆರಳದೆ ಸಾಧನೆ ನಡೆಯದು-ಶ್ರೀಮಾತೆ ಶಾರದಾ ದೇವಿ

 

ನಾವೆಲ್ಲರೂ ಬದುಕಿನ ನಿರಂತರ ವಿದ್ಯಾರ್ಥಿಗಳು. ಕಲಿಕೆ ನಿಂತ ದಿನವೇ ಮುನುಷ್ಯಮ ಮರಣ-ರಾಮಕೃಷ್ಣ ಪರಮಹಂಸ

ಶುಭವಾಗಲಿ, ಒಳಿತಾಗಲಿ.

ಧನ್ಯವಾದಗಳು, ಕಳೆದ ಮೂರು ವರ್ಷಗಳಿಂದ ನನ್ನನ್ನು ಸಹಿಸಿಕೊಂಡು ಜೊತೆ ಜೊತೆಗೆ ಹೆಜ್ಜೆ ಹಾಕಿದ್ದಕ್ಕೆ. ನಿಮ್ಮ ಜೊತಗೆ ನನಗೂ ಪಾಠ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ, ನಿರಂತರ ಕಲಿಕೆಗೆ ದಾರಿ ಮಾಡಿಕೊಟ್ಟು ಜೀವಂತವಾಗಿಟ್ಟಿರುವುದಕ್ಕೆ.


ವ್ಯಕ್ತಿಯ ಬದುಕಿನ ಅಸ್ಥಿತ್ವಕ್ಕೆ ಮದುವೆ, ಮಕ್ಕಳಷ್ಟೇ ಮಾನದಂಡವೇ


ವ್ಯಕ್ತಿಯ ಅಸ್ಥಿತ್ವಕ್ಕೆ ಮದುವೆ, ಮಕ್ಕಳು, ಸಂಸಾರವಷ್ಟೇ ಮಾನದಂಡವಲ್ಲ ಎಂಬ ಮಾತಿಗೆ ಪೂರಕವೆಂಬಂತೆ ಸ್ವತಂತ್ರವಾದ ಬದುಕು ಕಟ್ಟಿಕೊಂಡವಳು ನಾನು. ನನ್ನಷ್ಟಕ್ಕೆ ನಾನು ಖುಷಿಯಿಂದಲೇ ಬದುಕುತ್ತಿದ್ದೇನೆ. ಆದರೆ ಇತ್ತೀಚೆಗೆ ಸಂಭವಿಸಿದ ಕೆಲ ಘಟನೆಗಳು ನನ್ನನ್ನು ಒಂದಷ್ಟು ಆಲೋಚನೆಗೆ ದೂಡಿದ್ದು ಮಾತ್ರ ಸುಳ್ಳಲ್ಲ.
ಘಟನೆ-1
ಜಗತ್ತು ಬಹಳ ವೇಗವಾಗಿ ಓಡುತ್ತಲೇ ಇದೆ. ಕೊನೆ ಮೊದಲಿಲ್ಲದ ಓಟ ಇದು. ನಮಗೆ ಬೇಕೋ ಬೇಡವೋ ನಾವು ಎಲ್ಲರ ಜೊತೆ ಸೇರಿಕೊಂಡು ಓಡಲೇಬೇಕು, ಇಲ್ಲವಾದಲ್ಲಿ, ಕನಿಷ್ಠ ನಡೆಯಬೇಕು. ಎರಡೂ ಮಾಡದಿದ್ದರೆ ಇಲ್ಲಿರುವುದು ವ್ಯರ್ಥ ಎನ್ನುವಷ್ಟರ ಮಟ್ಟಿಗೆ ಬದಲಾಗುತ್ತಿದೆ. ಬದುಕಿನಲ್ಲಿ ಕೆಲವೊಮ್ಮೆ ಒಮ್ಮೆ ನಿಂತು ಸಾವರಿಸಿಕೊಂಡರೆ ಮುಂದೆ ಬಹು ದೂರ ಸಾಗಲು ಹುಮ್ಮಸ್ಸು ಬರುತ್ತದೆ. ಅದಕ್ಕಾದರೂ ಬ್ರೇಕ್‌ ತಗೋಬೇಕು ಅನ್ನುತ್ತಾರೆ ತಿಳಿದವರು.
ಒಮ್ಮೆ ಹೀಗಾಯಿತು. ನಿರಂತರ ಕೆಲಸದ ಒತ್ತಡದಿಂದ ಒಂದಷ್ಟು ಬ್ರೇಕ್‌ ತಗೋಬೇಕು ಅಂತಾ ನಿರ್ಧರಿಸಿ ಓಟದಿಂದ ಹಿಂದೆ ಸರಿಯುವುದಾಗಿ ಆತ ಘೋಷಿಸಿದ. ಸಹಜವಾಗಿ ಇದು ಉಳಿದೆಲ್ಲಾ ಸಹೋದ್ಯೋಗಿಗಳಿಗೆ ಆಘಾತವಾಯಿತು. ಕೆಲವರು ಅಯ್ಯೋ ಪಾಪ ಅವನಿಗೆ ಮದುವೆಯಾಗಿದೆ, ಸಂಸಾರವಿದೆ, ಮಕ್ಕಳಿದ್ದಾರೆ, ಬದುಕಿನಲ್ಲಿ ಸಾಕಷ್ಟು ಜವಾಬ್ದಾರಿಗಳಿವೆ. ಬಹಳ ಚಿಕ್ಕ ವಯಸ್ಸಿನಲ್ಲಿ ವಿಶ್ರಾಂತಿಗಾಗಿ ತೆರಳುತ್ತಿದ್ದಾನೆ ಎಂದು ಮರುಗಿದರು.
ಘಟನೆ-2
ಇತ್ತೀಚೆಗೆ ನನ್ನ ಗೆಳತಿಯೊಬ್ಬರು ಬಹಳ ನೋವಿನಿಂದಲೇ ಈ ಮಾತನ್ನು ಹೇಳಿದಳು. ನಾನು ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಹೆಚ್ಚು ಸಮಯ ಕೆಲಸದ ಸ್ಥಳದಲ್ಲೇ ನಿಲ್ಲುವಂತೆ ಹೇಳುತ್ತಾರೆ. ಅದೇ ಮತ್ತೊಬ್ಬರು ಮದುವೆಯಾಗಿದೆ, ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಅರ್ಧ ಗಂಟೆ ಮುಂಚಿತವಾಗಿಯೇ ಮನೆಗೆ ತೆರಳಲು ಅನುಮತಿ ನೀಡುತ್ತಾರೆ. ಹಾಗಾದರೆ ನನಗೆ ಬದುಕಿಲ್ಲವೇ. ಆಕೆ ಕೇಳಿದ ಪ್ರಶ್ನೆ ಸರಿಯಾಗಿಯೇ ಇತ್ತು. ಆದರೆ ಸೂಕ್ತ ಉತ್ತರ ಮಾತ್ರ ನನ್ನಲ್ಲಿ ಇರಲಿಲ್ಲ. ಏಕೆಂದರೆ ಅಂತಹದ್ದೇ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನೂ ಇದ್ದೆ. ಆಗಲೇ ನನ್ನ ಮನಸ್ಸು ಆ ಕುರಿತು ಆಲೋಚಿಸಲು ಮುಂದಾದದ್ದು. ಮದುವೆಯಾಗದೇ ಇದ್ದೀನಿ ಎಂದ ಮಾತ್ರಕ್ಕೆ ಜವಾಬ್ದಾರಿ ಇಲ್ಲವೇ ಅಥವಾ ನನ್ನದೇ ಬದುಕು ನಮಗಿಲ್ಲವೇ. ಮನೆ, ಕೆಲಸ, ಇದೆಲ್ಲದರ ಆಚೆಗೆ ನಮಗೆ ನಮ್ಮದೂ ಅಂತ ಏನೂ ಇಲ್ಲವೇ ಎಂದು ಕೇಳಿದಾಗಲೇ ನನಗೂ ಮನವರಿಕೆಯಾದದ್ದು ನನ್ನ ಪರಿಸ್ಥಿತಿಯೂ ಆಕೆಯದಕ್ಕಿಂತ ಭಿನ್ನವಾಗಿಲ್ಲ ಎಂದು.
ಬದುಕಿನಲ್ಲಿ ಮದುವೆ, ಮಕ್ಕಳಿದ್ದರೆ ಮಾತ್ರವೇ ಆತನಿಗೆ ಈ ಸಮಾಜದಲ್ಲಿ ಎಲ್ಲರಂತೆ ಬದುಕಲು ಹಕ್ಕಿರುವುದೇ. ಹಾಗಾದರೆ, ಮದುವೆಯಾಗದವರು ಅಥವಾ ಬೇರೆ ಬೇರೆಯಾಗಿರುವ ಅಥವಾ ಒಬ್ಬರೇ ಇರುವುದು ಈ ಸಮಾಜದ ಪ್ರಕಾರ ಅಪರಾಧವೇ ಎಂಬ ಪ್ರಶ್ನೆ ನನ್ನನ್ನು ಬಹಳವಾಗಿ ಕಾಡುತ್ತಿದೆ. ಮದುವೆ, ಮಕ್ಕಳೇ ಬದುಕಿನ ಜವಾಬ್ದಾರಿಗೆ ಮಾನದಂಡ ಎಂದು ಗುರುತು ಮಾಡಿದವರು ಯಾರು. ಮದುವೆ, ಮಕ್ಕಳನ್ನು ಹಡೆದ ಮೇಲೂ ಮೂರು ಕಾಸಿಗೂ ಪ್ರಯೋಜನವಿಲ್ಲದ ಅದೆಷ್ಟು ಜನರು ನಮ್ಮ ಮುಂದೆಯೇ ಓಡಾಡುತ್ತಿರುವಾಗ ಅದು ಹೇಗೆ ಹೀಗೆಲ್ಲಾ ಪೂರ್ವಾಗ್ರಹಗಳನ್ನು ಇಟ್ಟುಕೊಂಡು ಬದುಕುವುದು ತಿಳಿಯುತ್ತಿಲ್ಲ.